ಶಿರಸಿ:ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ದೇವನಹಳ್ಳಿಯ ಕೋಳಿ ಫಾರ್ಮ್ಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಕೋಳಿಗಳು ಕೊಚ್ಚಿಹೋಗಿ, ಲಕ್ಷಾಂತರ ರೂ. ಹಾನಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನಾರ್ಭಟ, ಕೊಚ್ಚಿ ಹೋದ ಸಾವಿರಾರು ಕೋಳಿಗಳು.. ದೇವನಹಳ್ಳಿಯ ಸರಗುಪ್ಪಾದ ಕಲಗದ್ದೆಯ ಸಂತೋಷ ಗೌಡ ಎಂಬುವರಿಗೆ ಸೇರಿದ ಕೋಳಿ ಫಾರ್ಮ್ ಗೆ ನೀರು ನುಗ್ಗಿ ಅಂದಾಜು 3 ಸಾವಿರ ಕೋಳಿ ಮರಿಗಳು ಕೊಚ್ಚಿ ಹೋಗಿವೆ ಎನ್ನಲಾಗಿದೆ. ಇದರಿಂದ ಸುಮಾರು 6 ಲಕ್ಷ ರೂ. ನಷ್ಟವಾಗಿದೆ ಎಂದು ಮಾಲೀಕರು ತಿಳಿಸಿದ್ದು, ಕಂದಾಯ ಇಲಾಖೆಯ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
'ನಾವು ಸಣ್ಣ ರೈತರಿದ್ದು, ಜೀವನೋಪಾಯಕ್ಕಾಗಿ ಇಟ್ಟುಕೊಂಡಿದ್ದ ಕೋಳಿ ಫಾರ್ಮ್ ನೆರೆಯಿಂದ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಮೊದಲು ಕೊರೊನಾದಿಂದ ನಷ್ಟದಲ್ಲಿದ್ದ ಉದ್ಯಮಕ್ಕೆ ಈಗ ಮಳೆ ಹೊಡೆತ ನೀಡಿದೆ. ಸಾಲ ಮಾಡಿ ಕೋಳಿ ಬೆಳೆಸಲಾಗಿತ್ತು, ಇನ್ನೊಂದು ವಾರದಲ್ಲಿ ಕೋಳಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಮಾಲೀಕ ಸಂತೋಷ ಗೌಡ ವಿನಂತಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ:
ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರೆದ್ದು, ಇಂದು ಬೆಳಿಗ್ಗೆಯಿಂದ ಸತತವಾಗಿ ಮಳೆ ಸುರಿಯುತ್ತಿದೆ. ಮಲೆನಾಡು ತಾಲೂಕುಗಳಾದ ಸಿದ್ದಾಪುರ, ಶಿರಸಿ, ಯಲ್ಲಾಪುರಗಳಲ್ಲಿ ಭರ್ಜರಿ ಮಳೆಯಾಗಿದ್ದು, ನದಿ ಪಾತ್ರ ಹಾಗೂ ಹೊಳೆಗಳ ಅಂಚಿನಲ್ಲಿರುವ ಗದ್ದೆಗಳಿಗೆ ನೀರು ನುಗ್ಗಿದೆ.
ಸಿದ್ದಾಪುರದ ವಾಟಗಾರ ಗ್ರಾಮದ ಗದ್ದೆಗಳಿಗೆ ನೀರು ನುಗ್ಗಿದ್ದು, ನೀರಿನ ರಭಸಕ್ಕೆ ಭತ್ತದ ಬೆಳೆ ಕೊಚ್ಚಿ ಹೋಗಿದೆ. ಅಲ್ಲದೇ ಮಳೆಯ ಅಬ್ಬರಕ್ಕೆ ಹಳ್ಳ ಕೊಳ್ಳ ನದಿಗಳು ತುಂಬಿ ಹರಿಯುತ್ತಿದ್ದು, ನದಿಗಳ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆ ಕಾಣಿಸಿಕೊಂಡಿದೆ. ಅದಲ್ಲದೇ ಸೇತುವೆಗಳೂ ಸಹ ಮತ್ತೆ ಜಲಾವೃತವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.