ಉಡುಪಿ : ತಾನು ಕಲಿತ ಪ್ರೌಢಶಾಲೆಯನ್ನ ಮುಚ್ಚಬಾರದು ಎಂದು ಬಾಲಕಿಯೊಬ್ಬಳು ಬರೆದ ಪತ್ರಕ್ಕೆ ಸ್ವತಃ ಪ್ರಧಾನಿ ಕಾರ್ಯಾಲಯ ಸ್ಪಂದಿಸಿದೆ.
ಜಿಲ್ಲೆಯ ಹಿರಿಯಡ್ಕ ಸಮೀಪದ ಪಂಚನಬೆಟ್ಟು ವಿದ್ಯಾವರ್ಧಕ ಅನುದಾನಿತ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ. ಇದೇ ಕಾರಣಕ್ಕೆ ಮತ್ತೊಂದು ಶಾಲೆಯೊಂದಿಗೆ ಈ ಶಾಲೆಯನ್ನು ವಿಲೀನಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಾಲೆಯ ಶಿಕ್ಷಕರನ್ನು ಬೇರೆ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿ ಆದೇಶಿಸಿದೆ. ಈ ನಡುವೆ ಗ್ರಾಮಸ್ಥರು ಈ ಪ್ರಕ್ರಿಯೆಯನ್ನು ವಿರೋಧಿಸಿದ ಕಾರಣ, ಸದ್ಯಕ್ಕೆ ಶಿಕ್ಷಣ ಇಲಾಖೆ ಕಲಿಕೆಗೆ ಅನುಮತಿ ನೀಡಿದೆ.
ಶಾಲೆ ಉಳಿಸಿಕೊಡುವಂತೆ ಪ್ರಧಾನಿ ಕಚೇರಿಗೆ ಪತ್ರ ಬರೆದ ವಿದ್ಯಾರ್ಥಿನಿ ಈ ನಡುವೆ ಶಾಲೆಯ ಹಿರಿಯ ವಿದ್ಯಾರ್ಥಿನಿ ವರ್ಷಿತಾ ಆರ್. ಪ್ರಧಾನಿ ಕಾರ್ಯಾಲಯಕ್ಕೆ ಒಂದು ಪತ್ರ ಬರೆದಿದ್ದಳು. ಪಂಚನಬೆಟ್ಟು ಶಾಲೆಯನ್ನು ಉಳಿಸಿ ಕೊಡಬೇಕೆಂದು ಮನವಿ ಮಾಡಿದ್ದಳು. ಸುತ್ತಮುತ್ತಲಿನ ಸುಮಾರು ಹದಿನೈದು ಕಿಲೋ ಮೀಟರ್ ವ್ಯಾಪ್ತಿಯ ಮಕ್ಕಳಿಗೆ ಈ ಶಾಲೆಯಿಂದ ಅನುಕೂಲವಾಗುತ್ತಿದೆ. ಶಾಲೆ ಮುಚ್ಚಿದರೆ ಎಂಟು ಕಿಲೋಮೀಟರ್ ದೂರದ ಬೈಲೂರಿಗೆ ಹೋಗಬೇಕಾಗುತ್ತದೆ. ಗ್ರಾಮಾಂತರ ಪ್ರದೇಶದ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿ ಎಂದು ಕೋರಿಕೆ ಸಲ್ಲಿಸಿದ್ದಳು.
ಪ್ರಧಾನಿ ಕಚೇರಿಯಿಂದ ಬಂದ ಪತ್ರ ಮನವಿಗೆ ಸ್ಪಂದಿಸಿರುವ ಪ್ರಧಾನಿ ಕಾರ್ಯಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಶಾಲೆ ಉಳಿಸಿಕೊಳ್ಳುವ ಬಗ್ಗೆ ಪರಾಮರ್ಶಿಸಿ ಉತ್ತರಿಸುವಂತೆ ಸೂಚನೆ ನೀಡಿದೆ. ನಾನು ಕಳೆದ ವರ್ಷವಷ್ಟೇ ಎಸ್ಎಸ್ಎಲ್ಸಿ ಮುಗಿಸಿದ್ದು, ನನ್ನ ತಂಗಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಊರ ಮಕ್ಕಳ ಶೈಕ್ಷಣಿಕ ಅನುಕೂಲಕ್ಕೆ ಈ ಶಾಲೆ ಉಳಿಯಬೇಕು ಎಂದು ವರ್ಷಿತಾ ತಿಳಿಸಿದ್ದಾಳೆ.