ತುಮಕೂರು:ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆ ಮಕ್ಕಳ ಕೈಗೆ ಸಿಕ್ಕಿದ್ದು, ಭಾರಿ ಅನಾಹುತ ತಪ್ಪಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯನಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ ನಡೆದಿದೆ.
ಶಾಲೆ ಪಕ್ಕದಲ್ಲೇ ಎಸೆದಿದ್ದ ಸಿಡಿಮದ್ದಿನ ಉಂಡೆಯನ್ನು ಬಾಲ್ ಅಂತ ಭಾವಿಸಿದ್ದ ಬಾಲಕರಿಬ್ಬರು, ಅದನ್ನು ತಮ್ಮ ಬಳಿ ಇಟ್ಟುಕೊಂಡು ಓಡಾಡಿದ್ದಾರೆ. ಯುವರಾಜ ಹಾಗೂ ಶ್ರೀನಿವಾಸ್ ಎಂಬ ಬಾಲಕರಿಗೆ ಸಿಕ್ಕ ವಸ್ತು ಸ್ಪೋಟಕವೆಂದು ಅವರಿಗೆ ಗೊತ್ತಾಗಿಲ್ಲ. ಯುವರಾಜ ನೀಡಿದ್ದ ಆ ಸ್ಪೋಟಕ ಉಂಡೆಯನ್ನು ಶ್ರೀನಿವಾಸ್ ತನ್ನ ತಂದೆಗೆ ನೀಡಿದ್ದ.
ಯಾವುದೋ ವಾಮಾಚಾರದ ಬಾಲ್ ಇರಬೇಕೆಂದು ಭಾವಿಸಿದ ಶ್ರೀನಿವಾಸ್ ತಂದೆ ಅದನ್ನು ದೂರಕ್ಕೆ ಎಸೆದಿದ್ದರು. ಎಸೆದ ಉಂಡೆಯನ್ನು ಅಲ್ಲಿಯೇ ಇದ್ದ ಬೀದಿನಾಯಿ ಕಚ್ಚಿತ್ತು. ನಾಯಿ ಕಚ್ಚುತ್ತಿದ್ದಂತೆ ಮದ್ದಿನ ಉಂಡೆ ಸ್ಫೋಟಗೊಂಡಿದೆ. ಬಾಯಿ ಛಿದ್ರಗೊಂಡ ಪರಿಣಾಮ ನಾಯಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಅದೃಷ್ಟವಶಾತ್ ಬಾಲಕರು ಅಪಾಯದಿಂದ ಪಾರಾಗಿದ್ದಾರೆ. ಸ್ಫೋಟಗೊಂಡಿರುವುದು ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆಯಾಗಿದೆ ಎಂಬುದು ಖಚಿತವಾಗಿದೆ.
ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆ ಪಕ್ಕದಲ್ಲಿ ಯಾರು ಎಸೆದಿದ್ದರು ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಮಕ್ಕಳಿಂದ ಮಾಹಿತಿ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಈ ಸಂಬಂಧ ಬುಕ್ಕಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶಾಲೆಯಲ್ಲಿ ಬಾಲ್ ಎಂದು ತಿಳಿದು ಬಾಂಬ್ ಜೊತೆ ಆಟ; ಸ್ಫೋಟಗೊಂಡು ವಿದ್ಯಾರ್ಥಿ ಸಾವು, ಹಲವರಿಗೆ ಗಾಯ