ಶಿವಮೊಗ್ಗ : ಮೈಸೂರು ಕಾಗದ ಕಾರ್ಖಾನೆಗೆ ನೀಡಿದ್ದ ಅರಣ್ಯ ಭೂಮಿಯ ಗುತ್ತಿಗೆ ಅವಧಿ ವಿಸ್ತರಿಸಬಾರದು ಎಂದು ಆಗ್ರಹಿಸಿ ಹೊಸನಗರದಲ್ಲಿ ಪರಿಸರ ಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಕಾಗದ ಕಾರ್ಖಾನೆಗೆ ಅರಣ್ಯ ಭೂಮಿ ಗುತ್ತಿಗೆ ವಿಸ್ತರಣೆ ವಿರೋಧ: ಪ್ರತಿಭಟನೆ
ಎಂಪಿಎಂ ಕಾರ್ಖಾನೆಗೆ ನೀಡಿರುವ ಅರಣ್ಯ ಭೂಮಿಯ ಗುತ್ತಿಗೆಯನ್ನು ವಿಸ್ತರಣೆ ಮಾಡಬಾರದು. ಹಾಲಿ ಇರುವ ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ತೆಗೆದು ಬೇರೆ ಸಸಿಗಳನ್ನು ಬೆಳೆಸಬೇಕು ಎಂದು ಹೊಸನಗರದಲ್ಲಿ ಪರಿಸರ ಜಾಗೃತಿ ವೇದಿಕೆಯ ಸದಸ್ಯರು ಆಗ್ರಹಿಸಿದರು.
ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪರಿಸರ ಜಾಗೃತಿ ವೇದಿಕೆಯ ಸದಸ್ಯರು, ಮಲೆನಾಡಿನ ಸಂಪತ್ಭರಿತ ಭೂಮಿಯನ್ನು ಕಾಗದ ಕಾರ್ಖಾನೆಗೆ ನೀಡಲಾಗಿತ್ತು. ಕಾರ್ಖಾನೆ ತನ್ನ ಉತ್ಪಾದನೆ ಸ್ಥಗಿತಗೊಳಿಸಿದೆ. ಈಗ ಕಾರ್ಖಾನೆಗೆ ಗುತ್ತಿಗೆ ನೀಡಿದ ಅವಧಿ ಮುಕ್ತಾಯವಾಗಿದೆ. ಅರಣ್ಯ ಭೂಮಿಯಲ್ಲಿ ಕಾರ್ಖಾನೆಗೆ ಬೇಕಾದ ಅಕೇಶಿಯ ಹಾಗೂ ನೀಲಗಿರಿ ಮರಗಳನ್ನು ಬೆಳೆಸಲಾಗಿತ್ತು. ಏಕ ಜಾತಿಯ ಮರಗಳಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಮರಗಳಿಂದ ಪ್ರಾಣಿ ಪಕ್ಷಿಗಳಿಗೆ ಯಾವುದೇ ಅನುಕೂಲವಿಲ್ಲ. ಆದ್ದರಿಂದ ಸರ್ಕಾರ ಎಂಪಿಎಂ ಕಾರ್ಖಾನೆಗೆ ಅರಣ್ಯ ಭೂಮಿಯ ಗುತ್ತಿಗೆಯನ್ನು ವಿಸ್ತರಣೆ ಮಾಡಬಾರದು. ಹಾಲಿ ಇರುವ ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ತೆಗೆದು ಬೇರೆ ಸಸಿಗಳನ್ನು ಬೆಳೆಸಬೇಕು ಎಂದು ಆಗ್ರಹಿಸಿದರು.
ಬಳಿಕ ತಹಶೀಲ್ದಾರ್ ರಾಜೀವ್ಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹನಿಯ ರವಿ, ಚಕ್ರವಾಕ ಸುಬ್ರಮಣ್ಯ, ರಂಗಕರ್ಮಿ ಏಸು ಪ್ರಕಾಶ್, ಸಾರಾ ಸಂಸ್ಥೆಯ ಧನುಷ್, ಪೊರ್ಣೆಶ್ ಸೇರಿ ಇತರರು ಇದ್ದರು.