ಶಿವಮೊಗ್ಗ :ಜಿಲ್ಲೆಯ ಇಬ್ಬರು ಮಾಜಿ ಸೈನಿಕರು ಮಲ್ನಾಡ್ ಕೊಂಚಿಂಗ್ ಸೆಂಟರ್ ಎನ್ನುವ ಸೈನಿಕ ತರಬೇತಿ ಸಂಸ್ಥೆ ಕಟ್ಟಿಕೊಂಡು, ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಉಚಿತ ಪೂರ್ವಬಾವಿ ಸೈನಿಕ ತರಬೇತಿ ನೀಡುವ ಮೂಲಕ ಸೇನೆಗೆ ಸೇರಬಯಸುವ ಯುವಕರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದಾರೆ.
ನಿವೃತ್ತಿ ಬಳಿಕವೂ ಮುಂದುವರೆದ ಸೇವೆ : ಮಾಜಿ ಯೋಧರಿಂದ ಯುವಕರಿಗೆ ಉಚಿತ ಸೇನಾ ತರಬೇತಿ
ಶಿವಮೊಗ್ಗದ ಇಬ್ಬರು ಮಾಜಿ ಸೈನಿಕರು ನಿವೃತ್ತಿಯ ನಂತರವೂ ತಮ್ಮ ದೇಶ ಸೇವೆಯನ್ನು ಮುಂದುವರೆಸಿದ್ದು, ಉತ್ಸಾಹಿ ಯುವಜನರಿಗೆ ಉಚಿತ ಸೇನಾ ತರಬೇತಿ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಕಿಶೋರ್ ಭೈರಾಪುರಾ ಹಾಗೂ ಸುಭಾಷ್ ಚಂದ್ರ ತೇಜಸ್ವಿ ಎಂಬ ಮಾಜಿ ಸೈನಿಕರು ಯುವ ಜನರನ್ನು ಭಾರತ ಮಾತೆಯ ಸೇವೆಗೆ ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಭಾರತೀಯ ಸೇನೆಯ ಆಯ್ಕೆಯ ರ್ಯಾಲಿಗೆ ಯುವಕರನ್ನು ಸಜ್ಜುಗೊಳಿಸುವ ಸಲುವಾಗಿ ಪ್ರತಿದಿನ ದೈಹಿಕ ತರಬೇತಿ ಜೊತೆಗೆ ಲಿಖಿತ ಪರೀಕ್ಷೆಯ ಬಗ್ಗೆ ಅನುಭವಿ ಉಪನ್ಯಾಸಕರಿಂದ ತರಬೇತಿ ಕೋಡಿಸಲಾಗುತ್ತಿದೆ. ಯುವಕರಿಗೆ ಪ್ರತಿದಿನ ಬೆಳಗ್ಗೆ 4-30 ರಿಂದ ದೈಹಿಕ ತರಬೇತಿ ಪ್ರಾರಂಭವಾಗುತ್ತದೆ. ನಂತರ ಅವರಿಗೆ ನುರಿತ ತರಬೇತುದಾರರಿಂದ ಉಪನ್ಯಾಸ ಸೇರಿದಂತೆ ಸೇನೆಯ ಎಲ್ಲಾ ಪೂರ್ವ ಬಾವಿ ತರಬೇತಿಯನ್ನು ರಾತ್ರಿಯವರೆಗೂ ನೀಡಲಾಗುತ್ತದೆ.
ಸದ್ಯ ಇವರ ಸಂಸ್ಥೆಯಲ್ಲಿ 35 ಕ್ಕೂ ಹೆಚ್ಚು ಉತ್ಸಾಹಿ ಯುವಕರು ಹಾಗೂ ಒಬ್ಬ ಯುವತಿ ತರಬೇತಿ ಪಡೆಯುತ್ತಿದ್ದು, ಸೇನೆಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಸೇನೆಗೆ ಸೇರಬಯಸುವವರಿಗೆ ಉಚಿತ ತರಬೇತಿಯ ಜೊತೆಗೆ ಊಟ ವಸತಿಯನ್ನೂ ಕಲ್ಪಿಸಿ, ಮಾಜಿ ಸೈನಿಕರು ಮಾದರಿಯಾಗಿದ್ದಾರೆ.