ಶಿವಮೊಗ್ಗ: ಈ ಬಾರಿಯ ಚುನಾವಣೆಗೆ ಸ್ಫರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಿವಮೊಗ್ಗ ವಿಧಾನಸಭಾ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು. ನಗರದ ಮಥುರಾ ಪ್ಯಾರಡೈಸ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಬೇಕೆಂಬ ಇಚ್ಚೆಯ ಹಿನ್ನೆಲೆಯಲ್ಲಿ ನನ್ನ ಭಾವನೆಗಳನ್ನು ಸಾರ್ವತ್ರಿಕವಾಗಿ ಪ್ರಕಟ ಮಾಡಿದ್ದೆ. ಪಕ್ಷದ ವೇದಿಕೆಯಲ್ಲಿಯೂ ವಿನಂತಿ ಮಾಡಿಕೊಂಡಿದ್ದೇನೆ. ಆದರೆ ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಕೆಲವರ ಮಕ್ಕಳ ಹೆಸರುಗಳು ಓಡಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಈಶ್ವರಪ್ಪ ಪತ್ರಿಕಾಗೋಷ್ಟಿಯಲ್ಲಿ ಆಡಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅವರ ಏಕವಚನ ಪ್ರಯೋಗ ಅವರ ಶಿಕ್ಷಣ ಮಟ್ಟ ತೋರಿಸುತ್ತದೆ. ಅವರ ಮಾತಿಗೆ ಅನುಕಂಪವಿದೆ. ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಈ ಬಾರಿ ಸ್ಪರ್ಧೆ ಖಚಿತ ಎಂದರು. ಈಶ್ವರಪ್ಪ ನಾಲಿಗೆ ಮೇಲೆ ಹಿಡಿತ ಇಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನನಗೆ ಅವನ್ಯಾವ ಲೆಕ್ಕ ಎಂದು ಹೇಳಿದ್ದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಖಚಿತವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ಬಗ್ಗೆ ಯಕಶ್ಚಿತ್ ಆಗಿ ಮಾತನಾಡಿದ ಈಶ್ವರಪ್ಪ ಪ್ರಭಾವಿ ನಾಯಕ. ಅವರು ಶಿವಮೊಗ್ಗ ಬಿಟ್ಟರೆ ಬೇರೆಲ್ಲೂ ಗೆಲ್ಲಲು ಆಗದ ಪ್ರಭಾವಿ ನಾಯಕ ಎಂದು ಲೇವಡಿ ಮಾಡಿದರು.
ನೀವು ಮತ್ತೆ ನಿಮ್ಮ ಮಗ ಚುನಾವಣೆಗೆ ಬರಲೇಬೇಕು. ಸಂಕೋಚ ಬಿಟ್ಟು ಈ ಬಾರಿ ತಮ್ಮಮಗನಿಗೆ ಟಿಕೆಟ್ ಕೇಳಿದ್ದೀರಿ. ನಿಮ್ಮನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ರುದ್ರೇಗೌಡರು, ಗಿರೀಶ್ ಪಟೇಲ್, ಸಿದ್ದರಾಮಣ್ಣ ಅವರಿಗೆ ಟಿಕೆಟ್ ಕೇಳಿಲ್ಲ ನಿಮ್ಮ ಮಗನಿಗೆ ಟಿಕೆಟ್ ಕೇಳಿದ್ದೀರಿ. ಈಶ್ವರಪ್ಪ ಅಥವಾ ಅವರ ಮಗ ಚುನಾವಣೆಗೆ ಬರಲಿ ರಾಜಕೀಯದ ಲೆಕ್ಕಗಳನ್ನು ಕೊಡುತ್ತೇನೆ. ಹಾಗೆಯೇ ಎಣಿಸಿಕೊಳ್ಳಲು ಕೊಡುತ್ತೇನೆ. ನಿಮ್ಮ ಗೋಡೌನ್ ನಲ್ಲಿ ಇರುವ ಎಣಿಕೆ ಮೆಷಿನ್ಗಳನ್ನು ತರಬೇಕಾಗುತ್ತೆ. ಈಶ್ವರಪ್ಪ ಅವರಿಗೆ ಅಧಿಕಾರದ ಹಪಾಹಪಿ ಇದೆ. ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅಧಿವೇಶನಕ್ಕೆ ಬರಲಿಲ್ಲ. ಈಶ್ವರಪ್ಪ ಅವರು ಮಂತ್ರಿಯಾಗಿದ್ದಾಗ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದರು.