ಬಿಜೆಪಿ- ಜೆಡಿಎಸ್ ಮೈತ್ರಿ ಕುರಿತು ಆಯನೂರು ಮಂಜುನಾಥ್ ವ್ಯಂಗ್ಯ ಶಿವಮೊಗ್ಗ : ಕುರುಡನ ಹೆಗಲ ಮೇಲೆ ಕುಂಟ ಕುಳಿತು ಸವಾರಿ ಮಾಡಿದ ಹಾಗಾಗಿದೆ ಬಿಜೆಪಿ-ಜೆಡಿಎಸ್ ಮೈತ್ರಿ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳಿಗೂ ಮೈತ್ರಿ ಅನಿವಾರ್ಯ ಆಗಿದೆ. ಕಳೆದ ಚುನಾವಣೆಯಲ್ಲಿ ಬಂದಂತಹ ಫಲಿತಾಂಶದಿಂದ ಕೈ ಕೈ ಹಿಡಿದುಕೊಂಡು ಹೋಗೋ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ಎರಡೂ ಪಕ್ಷಗಳ ಶಕ್ತಿ ಈಗ ಕುಂದಿದೆ. ಅವರ ನಿರೀಕ್ಷೆಗೆ ಮೀರಿ ಜನ ಅವರನ್ನ ತಿರಸ್ಕಾರ ಮಾಡಿದ್ದಾರೆ. ಹಾಗಾಗಿ ಒಬ್ಬರಿಗೊಬ್ಬರು ಕೈಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿರುವ ಕಾರಣ ಅವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.
ಇನ್ನು ಅವರಿಬ್ಬರ ಜೋಡಿ ಹೇಗಿದೆ ಅಂದರೆ ಕಾಂಗ್ರೆಸ್ ವೇಗಕ್ಕೆ ಅವರಿಬ್ಬರೂ ಓಡಲಾರರು ಕುರುಡನ ಹೆಗಲ ಮೇಲೆ ಕುಂಟ ಕುಳಿತು ಸವಾರಿ ಮಾಡಿದ ಹಾಗಿದೆ. ಕುರುಡನಿಗೆ ಕೈಕಾಲು ಗಟ್ಟಿ ಇದೆ, ದಾರಿ ಕಾಣುವುದಿಲ್ಲ. ಕುಂಟನಿಗೆ ದಾರಿ ಕಾಣುತ್ತದೆ, ನಡೆಯಲು ಆಗುವುದಿಲ್ಲ ಎನ್ನುವ ಮೂಲಕ ವ್ಯಂಗ್ಯವಾಡಿದರು.
ಕಾವೇರಿ ನೀರು ವಿಚಾರ :ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಆಗಾಧವಾದ ಪ್ರಯತ್ನವನ್ನು ಮಾಡುತ್ತಿದ್ದಾರೆ. ನೀರು ಕೊರತೆಯಿದ್ದ ಸಂದರ್ಭದಲ್ಲಿ ನೀರು ಎಷ್ಟು ಬಿಡಬೇಕು ಬಿಡಬಾರದು ಎಂದು ಹಿಂದಿನ ಆದೇಶ ಸಹ ಇದೆ. ಸರ್ಕಾರ ಒಂದು ರೀತಿಯಲ್ಲಿ ಇಕ್ಕಟಿನ ಸ್ಥಿತಿಯಲ್ಲಿದೆ. ನ್ಯಾಯಾಂಗದ ಆದೇಶ ಕಾಪಾಡಬೇಕು, ರೈತರ ಹಿತರಕ್ಷಣೆಯನ್ನೂ ಕಾಪಾಡುವ ಪರಿಸ್ಥಿತಿ ಇದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಅತ್ಯಗತ್ಯವಿದೆ. ಅದರ ಬದಲಾಗಿ ಇದನ್ನ ರಾಜಕೀಯ ವೇದಿಕೆ ಮಾಡಿಕೊಂಡು, ತಮ್ಮ ಮೈಲೇಜನ್ನು ಗಳಿಸಿಕೊಳ್ಳಲು ಹೋದರೆ ರಾಜ್ಯದ ರೈತರಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತೆ. ಎಲ್ಲ ರಾಜಕೀಯ ಪಕ್ಷಗಳು ಇದಕ್ಕೆ ಸಂಪೂರ್ಣ ಬೆಂಬಲ ಕೊಡಬೇಕು. ಅವರವರ ಕಾಲಘಟ್ಟದಲ್ಲೂ ಇದೇ ರೀತಿ ಆಗಿತ್ತು. ಆಗ ಎಲ್ಲರೂ ಸಹಕಾರ ನೀಡಿದ್ದರು. ಈ ಬಗ್ಗೆ ಅವರಿಗೂ ಮಾಹಿತಿ ಇದೆ. ನಮಗೆ ವಿಶ್ವಾಸವಿದೆ ಸಿಎಂ, ಡಿಸಿಎಂ ವಿಶೇಷ ಪ್ರಯತ್ನ ಮಾಡಿ ಜಯ ಗಳಿಸುತ್ತಾರೆ ಎಂದು ತಿಳಿಸಿದರು.
ಕೆಲವರು ನೀರು ಕಳ್ಳ ಎಂದು ಮಾತನಾಡುವುದು ಬೇಜವಾಬ್ದಾರಿಯ ಮಾತು. ಈ ರೀತಿಯ ಬೇಜವಾಬ್ದಾರಿತನದಿಂದ ಮಾತನಾಡುವುದು ಕೆಲವರಿಗೆ ಹವ್ಯಾಸವಾಗಿದೆ. ಮಾತನಾಡುವಾಗ ನಮಗಿಂತ ಎರಡು ಪಟ್ಟು ತಿನ್ನುತ್ತಿದ್ದಾರೆ ಎಂದಿದ್ದರು. ಹಾಗಾದರೆ ಮೊದಲು ಅವರು ತಿನ್ನುತ್ತಿದ್ದರು ಎಂದು ಒಪ್ಪಿಕೊಂಡ ಹಾಗಿದೆ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಟಾಂಗ್ ನೀಡಿದರು. ತಮ್ಮ ಅವಧಿಯ ಸಮಸ್ಯೆ ನೆನಪಿಸಿಕೊಂಡು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಸಮಸ್ಯೆ ಬಗೆಹರಿಸಲು ಸಹಕಾರ ನೀಡಬೇಕು ಎಂದು ಮಂಜುನಾಥ್ ಹೇಳಿದರು.
ವಿಧಾನ ಪರಿಷತ್ ಚುನಾವಣೆ ತಯಾರಿ ವಿಚಾರ :ನೈರುತ್ಯ ಪಧವೀದರ ಕ್ಷೇತ್ರ ಚಟುವಟಿಕೆ ದೃಷ್ಟಿಯಿಂದ ನೋಂದಣಿ ಕಾರ್ಯಾಲಯ ಪ್ರಾರಂಭ ಮಾಡಿದ್ದೇನೆ. ವಿಧಾನ ಪರಿಷತ್ಗೆ ಪುನಃ ಸ್ಪರ್ಧೆ ಮಾಡುವ ಇಚ್ಛೆ ಹೊಂದಿದ್ದೇನೆ. ನನ್ನಂತೆ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಆದ್ರೆ ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ. ಈ ತಿಂಗಳ 30 ನಂತರ ಚುನಾವಣೆ ನೋಟಿಫಿಕೇಷನ್ ಪ್ರಾರಂಭವಾಗಲಿದೆ. ಕಚೇರಿಯ ಬಳಕೆಯನ್ನು ಪದವೀಧರ ಮತದಾರು ಬಳಸಿಕೊಳ್ಳಬೇಕು ಎಂದರು.
ಮೆಲ್ಮನೆಯ ಶಾಸಕರು ಪ್ರಭಾವಿ ಆಗಿ ಕೆಲಸ ಮಾಡುವ ಅಗತ್ಯತೆ ಇದೆ. ಹಾಗಾಗಿ ಪುನಃ ಮೆಲ್ಮನೆಯಲ್ಲಿ ಪಕ್ಷ ಅವಕಾಶ ನೀಡುತ್ತದೆ ಅಂದುಕೊಂಡಿದ್ದೇನೆ. ಎಲ್ಲಾ ಇಲಾಖೆಗಳಲ್ಲಿ ನೌಕರರು ಅನೇಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಕ್ಷ ಟಿಕೆಟ್ ನೀಡಿದರೆ ಈ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ :ಕಾಂಗ್ರೆಸ್ ಸರ್ಕಾರ 'ಕರ್ನಾಟಕವನ್ನು ಕುಡುಕರ ತೋಟ' ಮಾಡಲಿದೆ: ಹೆಚ್.ಡಿ.ಕುಮಾರಸ್ವಾಮಿ