ಲಿಂಗಸೂಗೂರು: ತಾಲೂಕಿನ ದೇವರಭೂಪುರದ ಅಮರೇಶ್ವರ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನಲ್ಲಿರುವ 23 ಜನ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಮಾತನಾಡಿದ ಕಾರ್ಮಿಕರು, ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದ ನಮಗೆ ಕೆಲಸವೇ ಸಿಕ್ಕಿಲ್ಲ. ಆರ್ಥಿಕ ಸಂಕಷ್ಟದಿಂದ ಮರಳಿ ತಾಂಡಾಕ್ಕೆ ಬಂದಾಗ ನಮ್ಮನ್ನು ತಪಾಸಣೆ ಮಾಡುವ ನೆಪದಲ್ಲಿ 14 ದಿನ ಕ್ವಾರಂಟೈನ್ನಲ್ಲಿ ಇರಲು ಹೇಳಿದ್ದಾರೆ. ರಾತ್ರಿಯೂ ಊಟವಿಲ್ಲ. ಮಧ್ಯಾಹ್ನವಾದರೂ ಚಹ, ಉಪಹಾರ, ಊಟ ಏನೂ ನೀಡಿಲ್ಲ ಎಂದು ಕ್ವಾರಂಟೈನ್ನಲ್ಲಿರುವ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಸಣ್ಣ ಸಣ್ಣ ಮಕ್ಕಳು ಹಸಿವಿನಿಂದ ಚೀರಾಡುತ್ತಿವೆ. ನೀರು ಕುಡಿಸಿ ಸಮಾಧಾನ ಮಾಡುತ್ತಿದ್ದೇವೆ. ಕರೆತಂದ ಪೊಲೀಸರಿಗೆ ಮಾಹಿತಿ ನೀಡಿದರೂ ಬಂದಿಲ್ಲ. ನಮಗೆ ಯಾರೂ ಊಟ ಕೊಡುತ್ತಾರೋ ಗೊತ್ತಿಲ್ಲ. ಬೀಗ ಹಾಕಿಕೊಂಡು ಹೋಗಿದ್ದಾರೆ. ಸ್ಥಳೀಯ ಆಡಳಿತದವರು ನೆರವಿಗೆ ಬರಬೇಕು ಎಂದು ಕ್ವಾರಂಟೈನ್ನಲ್ಲಿರುವ ವೆಂಕಟೇಶ ಎಂಬುವವರು ಮನವಿ ಮಾಡಿದ್ದಾರೆ.
ಕ್ವಾರಂಟೈನ್ನಲ್ಲಿರುವವರ ಅಳಲು ಇದರ ಜೊತೆಗೆ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇಲ್ಲಿ ಸ್ನಾನಗೃಹ, ಶೌಚಾಲಯ, ಹಾಸಿಗೆ, ಹೊದಿಕೆ ವ್ಯವಸ್ಥೆಗಳಿಲ್ಲದೆ ಕ್ವಾರಂಟೈನ್ನಲ್ಲಿರುವರು ಪರದಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಪುರುಷರು ಕೂಡ ಬಯಲನ್ನೇ ಶೌಚ ಮತ್ತು ಸ್ನಾನ ಗೃಹವಾಗಿ ಬಳಸುವಂತಾಗಿದೆ. ಆದಷ್ಟು ಬೇಗ ವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.