ಮೈಸೂರು:ದೇಶದ ಅಭ್ಯುದಯಕ್ಕೆ ಉದ್ಯಮಿಗಳ ಕೊಡುಗೆ ಅಪಾರವಾಗಿದ್ದು, ಪಾರಂಪರಿಕ ದಸರಾ ಮಹೋತ್ಸವದಲ್ಲಿ ಸರ್ಕಾರದ ಜೊತೆ ನಿಮ್ಮೆಲ್ಲರ ಪಾಲ್ಗೊಳ್ಳುವಿಕೆ ಹಾಗೂ ಮಾರ್ಗದರ್ಶನ ಅತ್ಯಗತ್ಯವಾಗಿದೆ ಎಂದು ವಸತಿ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಹೇಳಿದರು.
ದಸರಾ ಕುರಿತು ನಗರದ ಲಲಿತ ಮಹಲ್ ಹೋಟೆಲ್ ನಲ್ಲಿ ನಡೆದ ಕೈಗಾರಿಕೋದ್ಯಮಿ, ಪ್ರವಾಸ, ಹೋಟೆಲ್ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು ದಸರಾ ಹಬ್ಬ ವಿಜೃಂಭಣೆಯಿಂದ ನಡೆಯಲು ನಿಮ್ಮ ಸಹಕಾರ ಮುಖ್ಯ ಎಂದು ಹೇಳಿದರು.
ದಸರಾ ಮಹೋತ್ಸವದಲ್ಲಿ ಉದ್ಯಮಿಗಳು ಯಾವುದಾದರೂ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಂಡರೆ ಅಂತಹ ಉದ್ಯಮಿಗಳ ಹೆಸರನ್ನು ಸರ್ಕಾರದ ವತಿಯಿಂದ ಕೃತಜ್ಞತೆ ಅರ್ಪಿಸುವ ಫಲಕಗಳನ್ನು ಹಾಕಲಾಗುವುದು ಹಾಗೂ ಜಿಲ್ಲೆಯ ಕೈಗಾರಿಕಾ, ಹೋಟೆಲ್ ಮುಂತಾದ ಉದ್ಯಮಿಗಳನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆಹ್ವಾನಿಸುವ ಉದ್ಯಮಿಗಳು ಬೇರೆ ಯಾರನ್ನು ದಸರಾ ವೀಕ್ಷಿಸಲು ನಿಯೋಜಿಸದೆ ತಾವೇ ಖುದ್ದಾಗಿ ದಸರಾಗೆ ಬರುವಂತೆ ಮನವಿ ಮಾಡಿದರು.
ದಸರಾ ಮಹೋತ್ಸವ ಮಹಾರಾಜರು ನಮಗೆ ನೀಡಿರುವ ಒಂದು ಪಾರಂಪರಿಕ ಹಬ್ಬ. ಇದು ನಮ್ಮ ನಿಮ್ಮೆಲ್ಲರ ಹಬ್ಬವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬರೂ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲು ನಾವು ನಿರ್ಧರಿಸಿದ್ದು, ಗ್ರಾಮೀಣ ದಸರಾ ಆಯೋಜಿಸುವ ಮೂಲಕ ರೈತರಿಗೂ ದಸರಾ ತಲುಪುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ದತೆ ನಡೆಸಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಗಣ್ಯರಾದ ಎಂ.ಶಿವಣ್ಣ, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.