ಮೈಸೂರು :ಸಿಎಂ ರೇಸ್ನಲ್ಲಿ ಸಿದ್ದರಾಮಯ್ಯ ಅವರೊಬ್ಬರೇ ಇಲ್ಲ. ಪಕ್ಷದ ಹಲವು ಹಿರಿಯರಿದ್ದಾರೆ ಎಂದು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಪರೋಕ್ಷವಾಗಿ ಮಾಜಿ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಹಿರಿಯರ ಸಾಲೇ ಇದೆ. ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್, ಡಿ ಕೆ ಶಿವಕುಮಾರ್ ಸೇರಿ ಹಲವರಿದ್ದಾರೆ. ನಾನಂತೂ ಸಿಎಂ ರೇಸ್ನಲ್ಲಿಲ್ಲ. ಸಿಎಂ ಯಾರಾಗಬೇಕೆಂಬ ನಿರ್ಧಾರ ಹೈಕಮಾಂಡ್ ಮಾಡುತ್ತೆ. ಚುನಾವಣೆಗೆ ಎರಡು ವರ್ಷ ಬಾಕಿ ಇದೆ. ಸಿಎಂ ಚರ್ಚೆ ಈಗ ಬೇಡ ಎಂದರು.
ಮೀಸಲಾತಿ, ಒಳ ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರದ ಮಾಜಿ ಸಚಿವರು, ಕಾಂತರಾಜ ಆಯೋಗ ಹಾಗೂ ಸದಾಶಿವ ಆಯೋಗ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಸುಖಾಸುಮ್ಮನೆ ಚರ್ಚೆ ಮಾಡೋದು ಸರಿಯಲ್ಲ. ಜೊತೆಗೆ ಮೀಸಲಾತಿ ಕೇವಲ ಹೋರಾಟಕ್ಕೆ ಮಾತ್ರ ಮೀಸಲಾಗಬಾರದು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಸವಣ್ಣನವರ ಚಿಂತನೆ ಬಗ್ಗೆ ಗೌರವವಿದ್ದರೆ, ಬಸವಣ್ಣನವರ ತತ್ವ ಪಾಲಿಸುವವರಾದರೆ ಮೀಸಲಾತಿಯ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ಅವಶ್ಯವಿರುವವರಿಗೆ ಮೀಸಲಾತಿ ನೀಡಿ ಎಂದರು.
ಸಿದ್ದರಾಮಯ್ಯ ಬ್ರಿಟಿಷ್ನವರಿದ್ದಂತೆ ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ವಿಶ್ವನಾಥ್ ಬಹಳ ಬುದ್ಧಿವಂತ ಇದ್ದಾನೆ. ಏನಾದ್ರೂ ಮಾಡಿ ಕಾಂಗ್ರೆಸ್ನಲ್ಲಿ ಬಿರುಕು ಮೂಡಿಸುವ ಚಿಂತನೆ ವಿಶ್ವನಾಥ್ಗೆ ಇದೆ. ಹಾಗಾಗಿ, ಈ ರೀತಿಯ ಹೇಳಿಕೆ ನೀಡ್ತಿದ್ದಾರೆ ಎಂದು ಕುಟುಕಿದರು.