ಮೈಸೂರು: ಸಂಸದ ಪ್ರತಾಪ್ ಸಿಂಹ ತಮ್ಮ ಸೇವೆಯ ಅಂಕಪಟ್ಟಿಯನ್ನು ಜನತೆ ಮುಂದಿಡಬೇಕು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾತಿಗೆ ಮುನ್ನ ಬೆಂಗಳೂರು - ಮೈಸೂರು ಹೆದ್ದಾರಿ ಅಭಿವೃದ್ಧಿ ಮಾಡಿದೆ ಎಂದು ಹೇಳುತ್ತಾರೆ. ಪ್ರತಾಪಸಿಂಹ ವ್ಯಾಪ್ತಿಗೆ ಬರೋದು ಕೇವಲ ಮೂರು ಕಿ.ಮಿ. ಅಷ್ಟೆ.
ಹಾಗಾದರೆ, ಮಂಡ್ಯ ಸಂಸದೆ ಸುಮಲತಾ, ಬೆಂಗಳೂರು ಗ್ರಾಮಾಂತರ, ನಗರ ಸಂಸದರು ಏನು ಮಾಡೇ ಇಲ್ವೇ? ಹೀಗಾಗಿ ಪ್ರತಾಪಿಸಿಂಹ ವಿರುದ್ದ ಮಾತನಾಡಿ ಕೆಸರನ್ನು ಮೈಮೇಲೆ ಎರಚಿಕೊಳ್ಳಲ್ಲ ಎಂದು ಹೇಳಿದರು. ಧರಂಸಿಂಗ್ ಅವಧಿಯಲ್ಲಿ ಮೈಸೂರು ಏರ್ ಪೋರ್ಟ್ ನಿರ್ಮಾಣಕ್ಕೆ ಹವಾಮಾನ ಇಲಾಖೆ ಜೊತೆ ಸಹಿ ಹಾಕಿದ್ದು ನಾನು. ನಾನು ನಾನು ಎನ್ನುವ ಮನೆ ಯಾವತ್ತು ಖಾಲಿ. ಜನ ನಿನ್ನ 8 ವರ್ಷ ಗೆಲ್ಲಿಸಿದ್ದರಲ್ಲಾ ನಿರೀಕ್ಷೆ ತಕ್ಕ ಏನ್ ಕೆಲಸ ಮಾಡಿದ್ಯಾ? ಎಂದು ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದರು.
ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದದ ವಿಚಾರವಾಗಿ ಮಾತನಾಡಿ, ಜಾಮೀಯಾ ಮಸೀದಿ ಜಾಗ ವಕ್ಫ್ ಬೋರ್ಡ್ ಸೇರಿದ್ದು. ಇತ್ತೀಚೆಗೆ ಪುರಾತತ್ವ ಇಲಾಖೆ ನಿರ್ವಹಣೆ ಮಾಡುತ್ತಿದೆ. ಮಸೀದಿ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ವಕ್ಫ್ ಬೋರ್ಡ್ ಹಾಗೂ ಪುರಾತತ್ವ ಇಲಾಖೆ ಸಭೆ ಕರೆಯುವಂತೆ ಮನವಿ ಮಾಡಿದ್ದೇನೆ. ಸಭೆ ಮೂಲಕ ಕುಳಿತು ಚರ್ಚೆ ಮಾಡಬೇಕು. ಸರ್ಕಾರ ಮೌನ ತಾಳಿದ್ದಲ್ಲಿ ಇಂತಹ ವಿವಾದಗಳಿಗೆ ಪುಷ್ಟಿ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ರಾಜಕಾರಣದಲ್ಲಿ ನಾನು ಇದ್ದರೆ ಕಾಂಗ್ರೆಸ್ ನಲ್ಲಿ ಮಾತ್ರ : ಜೆಡಿಎಸ್ ನಿಂದ ಎನ್ ಆರ್ ಕ್ಷೇತ್ರವನ್ನು ಗುರಿಯಾಗಿಸಿಕೊಂಡಿರುವ ವಿಚಾರವಾಗಿ ಮಾತನಾಡಿ, ಚುನಾವಣೆ ಅಂದರೆ ಪೈಪೋಟಿ. ಪ್ರತಿ ಬಾರಿಯೂ ಎನ್ಆರ್ ಗುರಿ ಮಾಡಲಾಗುತ್ತೆ. ರಾಜಕಾರಣ ನಿಂತ ನೀರಲ್ಲ, ಇಲ್ಲಿ ಇರುವವರು ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಇದ್ದವರು ಇಲ್ಲಿಗೆ ಬರುತ್ತಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯಲ್ಲ. ಕಾಂಗ್ರೆಸ್ ನನಗೆ ಕೊಟ್ಟಿರುವ ಕೊಡುಗೆಗಾಗಿ ಕಾಂಗ್ರೆಸ್ ಋಣ ತೀರಿಸಬೇಕಿದೆ. ರಾಜಕಾರಣದಲ್ಲಿ ನಾನು ಇದ್ದರೆ ಕಾಂಗ್ರೆಸ್ ನಲ್ಲಿ ಮಾತ್ರ. ನಮ್ಮ ತಂದೆ ನನಗೆ ಹೇಳಿದ್ರು ಕಾಂಗ್ರೆಸ್ಸಿಗನಾಗಿ ಸಾಯಬೇಕು ಎಂದು. ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಯೋಗ ಯಾವ ಪಕ್ಷಕ್ಕೂ ಸೇರಿಲ್ಲ. ಮೈಸೂರು ಕೂಡ ಯಾರ ಸ್ವತ್ತಲ್ಲ. ಇತಿಹಾಸದ ಪುಟದಲ್ಲಿ ಹೆಸರು ಸೇರಬೇಕಾದರೆ ನಿಮ್ಮ ಕೊಡುಗೆ ಏನು ಅಂತ ಹೇಳಬೇಕು. ಏನೂ ಅಭಿವೃದ್ದಿ ಮಾಡದೇ ಹೇಗೆ ಇತಿಹಾಸದ ಪುಟ ಸೇರುತ್ತದೆ. ನನಗೆ ಆರೋಗ್ಯದ ಕಾರಣದಿಂದ ಬಗ್ಗುವುದಕ್ಕೆ ಆಗುವುದಿಲ್ಲ ಎಂದು ನನ್ನ ಯೋಗ ಸಮಿತಿಗೆ ಸೇರಿಸಿಕೊಂಡಿಲ್ಲ ಎಂದು ಹೇಳಿದರು.