ಮೈಸೂರು:ಪ್ರೀತಿಸಿ ಸಂಸಾರ ನಡೆಸಿ ಬಳಿಕ ವಿವಾಹವಾಗಲು ನಿರಾಕರಿಸಿದ ಯುವಕನನ್ನು ಪೊಲೀಸರು ಮನವೊಲಿಸಿ ವಿವಾಹ ಮಾಡಿಸಿರುವ ಘಟನೆ ಟಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.
ಕಳೆದ 11 ವರ್ಷಗಳ ಹಿಂದೆ ಟಿ.ನರಸೀಪುರ ತಾಲೂಕಿನ ಎಸ್.ಮೇಗಡಹಳ್ಳಿ ಗ್ರಾಮದ ಗೀತಾ ಎನ್ನುವ ಯುವತಿಗೆ ಅದೇ ತಾಲೂಕಿನ ಕಟ್ಟೆಗಣನೂರು ಗ್ರಾಮದ ಚಿನ್ನಸ್ವಾಮಿ ಎಂಬ ಕೇಬಲ್ ಆಪರೇಟರ್ ಜೊತೆ ಪರಿಚಯವಾಗಿದೆ. ಕ್ರಮೇಣ ಈ ಸ್ನೇಹ ಪ್ರೀತಿಗೆ ತಿರುಗಿದೆ. ಮದುವೆ ಆಗದಿದ್ದರು ಇವರಿಬ್ಬರು ಸಂಸಾರ ನಡೆಸುತ್ತಿದ್ದು, ಪರಿಣಾಮ ಯುವತಿ ಗರ್ಭಿಣಿ ಆಗಿದ್ದಳು.
ಇಷ್ಟೆಲ್ಲ ಆದ ಬಳಿಕ ಚಿನ್ನಸ್ವಾಮಿ ವಿವಾಹವಾಗುವುದಿಲ್ಲವೆಂದು ನಿರಾಕರಿಸಿದ್ದಾನೆ. ವಿಷಯ ತಿಳಿದ ಯುವತಿಯ ಕುಟುಂಬಸ್ಥರು ಟಿ. ನರಸೀಪುರ ಠಾಣೆಯಲ್ಲಿ ಯುವಕನ ವಿರುದ್ಧ ವಂಚನೆಯ ದೂರು ದಾಖಲಿಸಿದ್ದರು. ಈ ಸಂಬಂಧ ಟಿ.ನರಸೀಪುರ ಠಾಣೆಯ ಪೊಲೀಸರು ಎರಡೂ ಕುಟುಂಬದವರನ್ನು ಕರೆಸಿ ಮನವೊಲಿಸಿ ದೇವಾಲಯದಲ್ಲಿ ಸರಳ ವಿವಾಹ ಮಾಡಿಸಿ 11 ವರ್ಷದ ಪ್ರೇಮ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.