ಮೈಸೂರು: ಬಹಳ ದಿನಗಳ ನಂತರ ದಸರಾದಲ್ಲಿ ಏರ್ ಶೋ ನಡೆಯುತ್ತಿರುವುದರಿಂದ ನೂಕು ನುಗ್ಗಲು ಉಂಟಾಗಬಹುದು. ಆದ್ದರಿಂದ ಅಕ್ಟೋಬರ್ 23 ರಂದು ಏರ್ ಶೋ ನಡೆಯುವ ದಿನ, ಒಂದು ಗಂಟೆ ಮುಂಚಿತವಾಗಿ ಬರಬೇಕು ಎಂದು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಏರ್ ಶೋ ಮತ್ತು ಜಂಬೂ ಸವಾರಿಗೆ ಗಜಪಡೆ ಮತ್ತು ಅಶ್ವಪಡೆ ಸಿದ್ದತೆ ಬಗ್ಗೆ ಮಾಹಿತಿ ನೀಡಿದರು.
ಇಂದು ಅಂತಿಮ ಹಂತದ ಗಜಪಡೆ ಮತ್ತು ಅಶ್ವಪಡೆ ಕುಶಾಲತೋಪು ತಾಲೀಮು ವೀಕ್ಷಣೆ ಮಾಡಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ, ಅಕ್ಟೋಬರ್ 23 ಆಯುಧ ಪೂಜೆ ಹಾಗೂ ಅಕ್ಟೋಬರ್ 24 ರಂದು ವಿಜಯದಶಮಿ ದಿನವಿದೆ. ಈ ಹಿನ್ನೆಲೆ 3 ಬಾರಿ ಗಜಪಡೆ ಹಾಗೂ ಅಶ್ವಪಡೆಗೆ ಕುಶಾಲತೋಪು ತಾಲೀಮು ನಡೆಸಿದ್ದೇವೆ. ಈ ತಾಲೀಮು ಅಂತಿಮವಾಗಿದ್ದು, ಇನ್ನೂ ಮೂರು ದಿನಗಳು ಅರಮನೆಯ ಒಳಗೆ ರಿಹರ್ಸಲ್ ನಡೆಯಲಿದೆ. ಆ ಮೂಲಕ ಗಜಪಡೆ, ಅಶ್ವಪಡೆ ಹಾಗೂ ಕುಶಾಲತೋಪು ಸಿಡಿಸುವ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಅರಮನೆಯ ಒಳಗೆ ಅಂತಿಮ ಹಂತದ ತಾಲೀಮು ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಏರ್ ಶೋ ಬಗ್ಗೆ ಹೇಳಿದ್ದೇನು? :ಬಹಳ ವರ್ಷಗಳ ನಂತರ ಏರ್ ಶೋ ನಡೆಯುತ್ತಿದೆ. ಅಕ್ಟೋಬರ್ 22 ರಂದು ಏರ್ ಶೋ ತಾಲೀಮು ಹಾಗೂ ಅಕ್ಟೋಬರ್ 23 ರಂದು 4 ಗಂಟೆಯಿಂದ 1 ಗಂಟೆಗಳ ಕಾಲ ಏರ್ ಶೋ ನಡೆಯಲಿದೆ. ಅದೇ ದಿನ ಅಕ್ಟೋಬರ್ 23 ರಂದು ಸಂಜೆ ಪಂಜಿನ ಕವಾಯತು ತಾಲೀಮು ಸಹ ನಡೆಯಲಿದೆ. ಅದಕ್ಕಾಗಿ ಒಂದು ಪಾಸ್ ವ್ಯವಸ್ಥೆ ಮಾಡಲಾಗುವುದು. ಏರ್ ಶೋ ದಿನ, 3 ಗಂಟೆಯೊಳಗೆ ಪಂಜಿನ ಕವಾಯಿತಿನ ಮೈದಾನಕ್ಕೆ ಬರಬೇಕು. ಪಾರ್ಕಿಂಗ್ ವ್ಯವಸ್ಥೆಯಲ್ಲಿ ವಾಹನ ಪಾರ್ಕ್ ಮಾಡಿ ಬರಬೇಕು. ಅಂದು ಏರ್ ಶೋ ಹಾಗೂ ಪಂಜಿನ ಕವಾಯಿತಿನ ರಿಹರ್ಸಲ್ ಇರುವುದರಿಂದ ನೂಕು ನುಗ್ಗಲು ಉಂಟಾಗಬಹುದು. ಅದಕ್ಕೆ ಮೊದಲೇ ಸ್ಥಳಕ್ಕೆ ಬರಬೇಕು ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.