ಮೈಸೂರು:ತಮ್ಮ ತೋಟದಲ್ಲಿ ತಮ್ಮೊಂದಿಗೆ ಅನ್ಯೋನ್ಯವಾಗಿದ್ದ ಕೋತಿ ಮರಿ ಹೊಸ ವರ್ಷದ ದಿನ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಸುದ್ದಿ ತಿಳಿದು ತಮ್ಮ ವಿದೇಶಿ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಶಾಸಕ ಸಾ.ರಾ. ಮಹೇಶ್ ವಾಪಸ್ ಬಂದಿದ್ದಾರೆ.
ಪ್ರೀತಿಯ ಕೋತಿಮರಿ ಸಾವಿನಿಂದ ಆಘಾತ: ವಿದೇಶ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿದ ಶಾಸಕ!
ತಮ್ಮ ತೋಟದಲ್ಲಿ ಸಾಕಿದ್ದ ಕೋತಿ ಮರಿ ಸಾವಿನ ಸುದ್ದಿಕೇಳಿ ಆಘಾತಕ್ಕೊಳಗಾದ ಕುಟುಂಬ ಸಮೇತ ವಿದೇಶ ಪ್ರವಾಸದಲ್ಲಿದ್ದ ಶಾಸಕ ಸಾ.ರಾ. ಮಹೇಶ್ ಅವರು ವಾಪಸ್ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮೈಸೂರಿಗೆ ಹಿಂದಿರುಗಿದ್ದಾರೆ.
ಮಾಜಿ ಸಚಿವ ಹಾಗೂ ಕೆ.ಆರ್. ನಗರದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರ ನಗರದ ಹೊರ ವಲಯದ ದಟ್ಟಗಳ್ಳಿ ತೋಟದಲ್ಲಿ ಕಳೆದ 3 ವರ್ಷಗಳಿಂದ ಕೋತಿ ಹಾವಳಿ ಹೆಚ್ಚಾಗಿದ್ದು, ಎಲ್ಲಾ ಫಸಲುಗಳನ್ನು ಮುರಿದು ಹಾಕುತ್ತಿದ್ದವು. ಈ ಕೋತಿ ಗುಂಪುಗಳನ್ನು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರು ಕೋತಿಗಳು ಹೋಗಿರಲಿಲ್ಲ. ಆದ್ರೆ 1 ವರ್ಷದ ನಂತರ ಇದ್ದಕ್ಕಿದ್ದಂತೆ ಕೋತಿಗಳು ಮಾಯವಾಗಿ ಒಂದು ಚಿಕ್ಕ ಮರಿ ಮಾತ್ರ ತೋಟದಲ್ಲಿ ಉಳಿದುಕೊಂಡಿತ್ತು. ಈ ಚಿಕ್ಕ ಮರಿಯು ಶಾಸಕ ಮಹೇಶ್ ಹಾಗೂ ಅವರ ಕುಟುಂಬದವರೊಂದಿಗೆ ಅನ್ಯೋನ್ಯವಾಗಿದ್ದು, ತೋಟದ ಕಾವಲುಗಾರನಂತೆ ಕೆಲಸ ನಿರ್ವಹಿಸುತ್ತಿತ್ತು. ಇದನ್ನು ನೋಡಿದ್ದ ಶಾಸಕ ಹಾಗೂ ಅವರ ಮಗ ಜಯಂತ್ ಈ ಕೋತಿ ಮರಿಗೆ ಚಿಂಟು ಎಂದು ಹೆಸರಿಟ್ಟಿದ್ದರು.
ಹೊಸ ವರ್ಷಾಚರಣೆಗೆ ಕುಟುಂಬ ಸಮೇತ ಸಿಂಗಪುರ ಪ್ರವಾಸಕ್ಕೆ ಹೋಗಿದ್ದ ಶಾಸಕ ಸಾ.ರಾ. ಮಹೇಶ್ ಜನವರಿ 4 ರಂದು ಮೈಸೂರಿಗೆ ವಾಪಸ್ ಆಗಬೇಕಿತ್ತು. ಈ ಕೋತಿ ಮರಿ ಸಾವನ್ನಪ್ಪಿರುವ ವಿಚಾರ ತಿಳಿದು ಶಾಸಕರು ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ ಜನವರಿ 2ರಂದೇ ಕುಟುಂಬ ಸಮೇತ ಮೈಸೂರಿಗೆ ಬಂದು ಜನವರಿ 3 ರಂದು ಮನುಷ್ಯರಿಗೆ ಅಂತ್ಯಕ್ರಿಯೆ ಮಾಡುವ ರೀತಿಯಲ್ಲೇ ಕೋತಿಗೆ ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ. ಈ ವಿಚಾರವನ್ನು ಯಾವುದೇ ಮಾಧ್ಯಮಕ್ಕೆ ಹಾಗೂ ಸ್ನೇಹಿತರಿಗೆ ತಿಳಿಸದೆ ಸಾ.ರಾ. ಮಹೇಶ್ ಕುಟುಂಬ ಕೋತಿ ಮರಿ ಚಿಂಟುವಿನ ಅಂತ್ಯಕ್ರಿಯೆ ನೆರವೇರಿಸಿ , 3 ದಿನಗಳ ನಂತರ ಅವರ ತೋಟದಲ್ಲೇ ಹಾಲುತುಪ್ಪ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ.