ಮೈಸೂರು: ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗುವುದಿಲ್ಲ. ಚೆನ್ನಾಗಿ ಓದಿ, ಭಯಪಡಬೇಡಿ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶಕುಮಾರ್ ವಿದ್ಯಾರ್ಥಿಗಳಿಗೆ ಅಭಯ ನೀಡಿದ್ರು.
ಇಂದು ನಂಜನಗೂಡಿನ ಸರ್ಕಾರಿ ಶಾಲೆಯಲ್ಲಿ ತಾಲೂಕಿನ 65 ಶಾಲೆಗಳಿಂದ ಬಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವ ಸುರೇಶಕುಮಾರ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಗೆ ಹೆದರಬಾರದು. ಧೈರ್ಯದಿಂದ ಇರಬೇಕು. ಪರೀಕ್ಷೆ ಎಂಬುದು ಒಂದು ವ್ರತ ಇದ್ದ ಹಾಗೆ. ಪರೀಕ್ಷೆ ಸಮಯದಲ್ಲಿ ಮೊಬೈಲ್ ಹಾಗೂ ಟಿವಿಯಿಂದ ದೂರವಿದ್ದು, ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ರು.
ಎಸ್.ಎಸ್.ಎಲ್.ಸಿ ಪೇಪರ್ ಲೀಕ್ ಆಗಿದೆ ಎಂದು ಸುದ್ದಿ ಹರಡುತ್ತಿದೆ ಎಂದು ವಿದ್ಯಾರ್ಥಿವೋರ್ವನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದು ಎಸ್.ಎಸ್.ಎಲ್.ಸಿ ಪೇಪರ್ ಲೀಕ್ ಅಲ್ಲ ಅದು ಪೂರ್ವಭಾವಿ ಪರೀಕ್ಷೆ ಪೇಪರ್. ಎಸ್.ಎಸ್.ಎಲ್.ಸಿಯ ಮುಖ್ಯ ಪರೀಕ್ಷೆಗೆ ಅದರದೇ ಆದ ವ್ಯವಸ್ಥೆ ಇದೆ. ಅದಕ್ಕೆ ಡಿಸಿ, ಅಡಿಷನಲ್ ಡಿಸಿ ಖಜಾನಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ತಂಡವಿರುತ್ತದೆ. ಹಾಗಾಗಿ ಭಯ ಪಡಬೇಡಿ ಎಂದು ಸಚಿವರು ವಿದ್ಯಾರ್ಥಿಗಳಿಗೆ ತಿಳಿಸಿದರು.