ಮೈಸೂರು:ಕಟೀಲ್ ಮತ್ತು ನಾನು ಕೂತು ಚರ್ಚೆ ಮಾಡಿಯೇ ಬಿಬಿಎಂಪಿಗೆ ಮೇಯರ್ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಮಾಧ್ಯಮದವರು ದಯವಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ಯಡಿಯೂರಪ್ಪ ಗರಂ ಆದ ಘಟನೆ ನಡೆಯಿತು.
ಮಾಧ್ಯಮದವರು ಬೆಂಕಿ ಹಚ್ಚುವ ಕೆಲಸ ಮಾಡಬಾರದು.. ಸಿಎಂ ಯಡಿಯೂರಪ್ಪ ಗರಂ
ದಸರಾದ 3ನೇ ದಿನದ ಕಾರ್ಯಕ್ರಮಗಳ ಉದ್ಘಾಟನೆಗೆಂದು ಆಗಮಿಸಿದ್ದ ಸಿಎಂ ಬಿಎಸ್ವೈ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಆಕ್ಷೇಪಿಸಿದರು. ಮಾಧ್ಯಮದವರು ಬೆಂಕಿ ಹಚ್ಚುವ ಕೆಲಸವನ್ನು ಎಂದಿಗೂ ಮಾಡಬೇಡಿ ಎಂದರು.
ಇಂದು ದಸರಾದ 3ನೇ ದಿನದ ಕಾರ್ಯಕ್ರಮಗಳ ಉದ್ಘಾಟನೆಗೆ ಶಿಕಾರಿಪುರದಿಂದ ನಗರದ ಲಲಿತ್ ಮಹಲ್ ಹೆಲಿಪ್ಯಾಡ್ಗೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆಯನ್ನು ಮುಂದೂಡಲು ನಾನು ಮತ್ತು ನಳಿನ್ ಕುಮಾರ್ ಕಟೀಲ್ ಸೇರಿ ಪ್ರಯತ್ನ ಮಾಡಿದೆವು. ಆದರೆ, ಚುನಾವಣಾ ಆಯೋಗದವರು ಈಗಾಗಲೇ ಎಲ್ಲಾ ಸೂಚನೆ ರೆಡಿ ಮಾಡಿದ್ದೇವೆ ಎಂದರು. ಅವರು ಮನವರಿಕೆ ಮಾಡಿಕೊಟ್ಟ ಮೇಲೆ ಬಿಬಿಎಂಪಿ ಮೇಯರ್ ಚುನಾವಣೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಮೇಯರ್, ಉಪಮೇಯರ್ ಆಯ್ಕೆಯನ್ನು ನಾನು ಹಾಗೂ ನಳಿನ್ ಕುಮಾರ್ ಕಟೀಲ್ ಸೇರಿ ಆಯ್ಕೆ ಮಾಡಿದ್ದೇವೆ. ಈ ವಿಚಾರದಲ್ಲಿ ಮಾಧ್ಯಮದವರು ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಸಚಿವ ಆಶೋಕ್ ಹಾಗೂ ಎಲ್ಲಾ ಬೆಂಗಳೂರಿನ ಶಾಸಕರು ಜೊತೆಗೆ ಸೇರಿ ಆಯ್ಕೆ ಮಾಡಿದ್ದೇವೆ. ನಮ್ಮವರು, ಬೇರೆಯವರು ಎಂದು ಮಾಧ್ಯಮದವರು ಊಹಾಪೋಹ ಸುದ್ದಿ ತೋರಿಸಬಾರದು. ನನ್ನ ಮತ್ತು ಕಟೀಲ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ ಯಡಿಯೂರಪ್ಪ, ಈ ಪ್ರಶ್ನೆಯನ್ನು ಮಾಧ್ಯಮದವರು ಕೇಳಲು ಸೂಕ್ತ ಅಲ್ಲಾ ಎಂದರು.