ಮೈಸೂರು: ಒಕ್ಕಲಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಖಾಸಗಿಯಾಗಿ ಏರ್ಪಡಿಸಿದ್ದ ದಸರಾ ಯುವ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಕರ ಪಟ್ಟಿಯಿಂದ ಪ್ರೊ. ಕೆ.ಎಸ್. ಭಗವಾನ್ ಅವರ ಹೆಸರನ್ನು ಕೈಬಿಡಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಇಂದು (ಅ.16) ಬೆಳಗ್ಗೆ ನಡೆಯಲಿರುವ ದಸರಾ ಯುವ ಕವಿಗೋಷ್ಠಿಯ ಉದ್ಘಾಟನೆಯನ್ನು ಸಾಹಿತಿ ಮತ್ತು ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ಅವರ ಬದಲಿಗೆ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ಸಾಹಿತಿ ಡಾ. ಡಿ.ಕೆ. ರಾಜೇಂದ್ರ ಉದ್ಘಾಟಿಸಲಿದ್ದಾರೆ.
ಇತ್ತೀಚಿಗೆ ನಡೆದ ಮಹಿಷಾ ದಸರಾ ಸಮಾರಂಭದಲ್ಲಿ ಒಕ್ಕಲಿಗ ಸಮುದಾಯದ ಕುರಿತು ಪ್ರೊ.ಕೆ.ಎಸ್. ಭಗವಾನ್ ಅವರು ಅವಹೇಳನಕಾರಿ ಹೇಳಿ ನೀಡಿದ ಕಾರಣ ಅವರ ವಿರುದ್ಧ ಒಕ್ಕಲಿಗ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಜೊತೆಗೆ ಅ.16 ನಡೆಯಲಿರುವ ದಸರಾ ಯುವ ಕವಿಗೋಷ್ಠಿಯ ಉದ್ಘಾಟನೆಗೆ ಆಗಮಿಸಲಿರುವ ಪ್ರೊ. ಕೆ.ಎಸ್. ಭಗವಾನ್ ಅವರ ವಿರುದ್ಧ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವ ನಿರ್ಧಾರ ಕೈಗೊಂಡಿದ್ದರು.
ಕವಿಗೋಷ್ಠಿ ಉದ್ಘಾಟಕರ ಪಟ್ಟಿಯಿಂದ ಪ್ರೊ ಭಗವಾನ್ ಹೆಸರು ಕೈಬಿಟ್ಟ ಆಯೋಜಕರು ವಿಶ್ವ ವಿಖ್ಯಾತ ದಸರಾ ಅಂಗವಾಗಿ ನಡೆಯುತ್ತಿರುವ ದಸರಾ ಯುವ ಕವಿಗೋಷ್ಠಿಗೆ ಯಾವುದೇ ಚ್ಯುತಿ ಬಾರದಂತೆ ನಡೆಸುವ ಆಶಯ ಮತ್ತು ಪ್ರೊ ಭಗವಾನ್ ಅವರ ಸುರಕ್ಷತೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಸದಾಶಯವಿದೆ. ಜೊತೆಗೆ ಸಾಹಿತ್ಯ ವಲಯದ ಸೌಹಾರ್ದ ವಾತಾವರಣದ ರಕ್ಷಣೆ, ಸಾಮಾಜಿಕ ಸಾಮರಸ್ಯದ ಹಿತದೃಷ್ಟಿಯಿಂದ ಪ್ರೊ.ಕೆ.ಎಸ್. ಭಗವಾನ್ ಅವರ ನಿವಾಸಕ್ಕೆ ಭಾನುವಾರ ತೆರಳಿ ಅವರ ಜೊತೆ ಚರ್ಚೆ ಮಾಡಿ, ಬಿಗುವಿನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು, ಅವರ ಅವಗಾಹನೆಗೆ ತಂದು ಉದ್ಘಾಟಕರನ್ನು ಬದಲಾಯಿಸಲಾಗಿದೆ. ಜಿಲ್ಲಾ ಕಸಾಪ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಅವರು ಸಹ, ಪ್ರೊ. ಭಗವಾನ್ ಅವರ ಜೊತೆಗೆ ಈ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದರಿಂದ ಉತ್ತಮ ಸಾಹಿತ್ಯ ವಾತಾವರಣ ಮತ್ತು ಸೌಹಾರ್ದತೆಯ ಆಶಯದ ಹಿನ್ನೆಲೆಯಲ್ಲಿ ಒಕ್ಕಲಿಗ ಸಂಘಟನೆಗಳ ಮನವಿಯ ಮೇರೆಗೆ ಹಿರಿಯ ವಿದ್ವಾಂಸರಾದ ಪ್ರೊ. ಡಿ.ಕೆ. ರಾಜೇಂದ್ರ ಅವರು ಇಂದು ಬೆಳಗ್ಗೆ ನಡೆಯಲಿರುವ ದಸರಾ ಯುವ ಕವಿಗೋಷ್ಠಿಯನ್ನು ಸಂತಸದಿಂದ ಉದ್ಘಾಟಿಸಲು ಒಪ್ಪಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಒಕ್ಕಲಿಗರ ಬಗ್ಗೆ ಪ್ರೊ ಭಗವಾನ್ ವಿವಾದಾತ್ಮಕ ಹೇಳಿಕೆ: ಬಂಧಿಸುವಂತೆ ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ ಒತ್ತಾಯ