ಕರ್ನಾಟಕ

karnataka

ETV Bharat / state

ರೈತ ಸಂಘಟನೆಯೇ ನನ್ನ ಮೊದಲ ಆಯ್ಕೆಯೇ ಹೊರತು ರಾಜಕಾರಣವಲ್ಲ: ದರ್ಶನ್ ಪುಟ್ಟಣ್ಣಯ್ಯ

ಮುಂದೆ ರೈತ ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಆಲೋಚನೆಯಿದೆ ಅದರಂತೆ ಕೆಲಸ ಮಾಡಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.

By

Published : May 27, 2023, 8:38 PM IST

ದರ್ಶನ್ ಪುಟ್ಟಣ್ಣಯ್ಯ
ದರ್ಶನ್ ಪುಟ್ಟಣ್ಣಯ್ಯ

ರೈತ ಸಂಘಟನೆ ಬಗ್ಗೆ ದರ್ಶನ್​ ಪುಟ್ಟಣ್ಣಯ್ಯ ಹೇಳಿಕೆ

ಮೈಸೂರು:ರೈತ ಸಂಘಟನೆಯೇ ನನ್ನ ಮೊದಲ ಆಯ್ಕೆಯೇ ಹೊರತು ರಾಜಕಾರಣವಲ್ಲ, ರೈತ ಪರವಾಗಿ ಕೆಲಸ ಮಾಡುವುದು ನನ್ನ ಉದ್ದೇಶ ಎಂದು ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು. ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ನಡೆದ ಅಭಿನಂದನೆ ಸ್ವೀಕರಿಸಿ ನಂತರ ಮಾತನಾಡಿದರು.

ಶಾಸಕನಾದ ನಂತರ ಜವಾಬ್ದಾರಿ ಹೆಚ್ಚಿದೆ. ರೈತ ಸಂಘಟನೆ ಶುರುವಾಗಿ 41 ವರ್ಷಗಳು ಕಳೆದಿವೆ. ರೈತ ಸಂಘಟನೆಗಳಿಗೆ ನಮ್ಮ ತಂದೆಯವರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ರೈತ ಸಂಘಟನೆ ಮುಖಂಡರು ಹಾಗೂ ನಮ್ಮ ತಂದೆಯವರು ಸೇರಿ ಸಂಘಟನೆಗಳನ್ನು ಮುನ್ನಡೆಸಿಕೊಂಡು ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಮುಂದೆ ರೈತ ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಆಲೋಚನೆಯಿದೆ ಅದರಂತೆ ಕೆಲಸ ಮಾಡಲಾಗುವುದು. ನನ್ನ ಮೊದಲ ಆಯ್ಕೆ ರೈತ ಸಂಘಟನೆ, ಹಾಗೂ ಚಳವಳಿಯೇ ಹೊರತು ರಾಜಕೀಯವಲ್ಲ. ನಾನು ಚುನಾವಣೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ ರಾಜ್ಯದ ರೈತ ಸಂಘಟನೆ, ದಲಿತ ಸಂಘರ್ಷ ಸಮಿತಿ, ಹಲವು ಪ್ರಗತಿಪರ ಸಂಘಟನೆಯವರು ಬಂದು ನನಗೆ ಬೆಂಬಲ ನೀಡಿ ಎಲ್ಲ ರೀತಿಯ ಸಹಕಾರ ನೀಡಿ ನನ್ನ ಗೆಲುವಿಗೆ ಸಹಕಾರಿಯಾಗಿದ್ದಾರೆ ಎಂದು ಸ್ಮರಿಸಿದರು.

ರೈತರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ಸಚಿವರಿಗೆ ಈಗಾಗಲೇ ಮನವಿ ಪತ್ರ ಸಲ್ಲಿಸಿದ್ದೇನೆ. ರೈತ ಸಂಘಟನೆಯಲ್ಲಿ ಚಿಂತಕರು ಇದ್ದಾರೆ ಇವರೆಲ್ಲರ ಸಲಹೆ, ಸಹಕಾರದೊಂದಿಗೆ ವಿಧಾನ ಸೌಧದಲ್ಲಿ ಧ್ವನಿ ಎತ್ತಲಿದ್ದೇನೆ ಎಂದರು. ರೈತರಿಗೆ ಮಾರಕವಾಗಿರುವ ಕಾಯ್ದೆಗಳ ನಿಷೇಧ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸುವುದು. ಕ್ಷೇತ್ರದ ಮೂಲ ಭೂತ ಸೌಕರ್ಯಗಳು, ರೈತರಿಗೆ ಇಲಾಖೆಯಲ್ಲಿ, ಕಾನೂನಿನಲ್ಲಿ ದೊರೆಯುವ ಸೌಲಭ್ಯಗಳು ಸಕಾಲಕ್ಕೆ ದೊರೆಯುವಂತೆ ಮಾಡಲಾಗುವುದು. ರೈತರಿಗೆ ಆರ್ಥಿಕತೆಯನ್ನು ಸೃಜಿಸುವುದರ ಬಗ್ಗೆ, ಖರ್ಚು ಕಡಿಮೆಯಾಗಿ ಆದಾಯಗಳಿಸುವಂತ ಹಲವು ಯೋಜನೆಗಳನ್ನು ಹಾಕಿಕೊಂಡು ಅದರಂತೆ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ರೈತರಿಗೆ ರೇಷ್ಮೆ, ತೋಟಗಾರಿಕೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದು ಆದಾಯ ತರುವಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ನಾನು ಸಹ ನಮ್ಮ ತಂದೆಯವರು ನಡೆದಂತೆ ನಡೆಯುತ್ತೇನೆ. ರೈತರ ಹೋರಾಟಗಳಿಗೆ ನಾನು ಯಾವತ್ತಿಗೂ ಮುಂದೆ ಇರುತ್ತೇನೆ ಎಂದು ಹೇಳಿದರು. ಬಳಿಕ ಬಡಗಲಪುರ ರೈತ ನಾಗೇಂದ್ರ ಮಾತನಾಡಿ, ಕರ್ನಾಟಕದಲ್ಲಿ 7 ದಶಕಗಳನ್ನು ಅವಲೋಕಿಸಿದರೆ ಕರ್ನಾಟಕ ಚಳುವಳಿಗಳ ನಾಡು.

12 ನೇ ಶತಮಾನ ಶರಣರ ನಾಡು. ವಾಲ್ಮೀಕಿ, ಪಂಪ, ಕುವೆಂಪು ಹುಟ್ಟಿದ ನಾಡು ಇವರ ಕಾಲದಲ್ಲಿ ಚಳವಳಿಗಳಿಗೆ ಮಹತ್ವವಿದ್ದ ಕಾಲವದು. 1975ರಲ್ಲಿ ಚಳುವಳಿಗಾರರು ರಸ್ತೆಯಲ್ಲಿ ನಿಂತು ಕೂಗಿ ನೀತಿ, ನಿಯಮಗಳನ್ನು ರೂಪಿಸುವುದು ವಿಧಾನ ಸೌಧದಲ್ಲಿ ಕಾನೂನಾಗಿ ನಿರ್ಣಯವಾಗುತ್ತಿದ್ದವು ಅಷ್ಟು ಶಕ್ತಿ ಚಳುವಳಿಗಳಿಗೆ ಇತ್ತು ಎಂದು ತಿಳಿಸಿದರು.

1980 ರಲ್ಲಿ ರೈತ ಚಳವಳಿ ಜನ್ಮತಾಳಿ ಅಲ್ಲಿಂದ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವವರೆಗೂ ಸಹ ಕರ್ನಾಟಕದ ರೈತ, ದಲಿತ, ಭಾಷಾ ಚಳುವಳಿಗಳು ಕೈಗೊಂಡ ನಿರ್ಣಯಗಳೇ ಸರ್ಕಾರದಿಂದ ಆಡಳಿತದ ಮುನ್ನುಡಿಯಾಗುತ್ತಿತ್ತು. WTO ಬಂದ ಮೇಲೆ ಚಳವಳಿಗಳ ಅಸ್ತತ್ವವೇ ಕಷ್ಟವಾಗಿವೆ. ಪ್ರತಿಭಟನೆ ಶಕ್ತಿ ಕುಂದುಹೋಗಿ ಬಂಡವಾಳ ಶಾಹಿ ವ್ಯವಸ್ಥೆ ವಿಜೃಂಭಿಸಿ, ಅನೀತಿ ರಾಜಕಾರಣ ಹೆಚ್ಚಿ, ಸತ್ಯ ಮರೆಮಾಚುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ ಚುನಾವಣಾ ವ್ಯವಸ್ಥೆ ಕೆಟ್ಟು ಹೋಗಿರುವುದರಿಂದ ಚಳವಳಿಯ ಹಿನ್ನೆಲೆ ಹೊಂದಿರುವವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುವುದು ಸಹ ಕಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಅವರು ಚಳುವಳಿಯ ರಾಜಕಾರಣದಲ್ಲಿ ಆಯ್ಕೆ ಯಾಗಿರುವುದು ರೈತ ಸಮುದಾಯದವರೆಲ್ಲರಿಗೂ ಹೆಮ್ಮೆ ತಂದಿದೆ. 1980ರ ಚುನಾವಣೆ ಸಂದರ್ಭದಲ್ಲಿ ಚಳವಳಿಗಳು ಹೆಚ್ಚು ಜನ ಮನ್ನಣೆಗಳಿಸಿದ್ದವು ಆದರೆ, ವಿಧಾನ ಸೌಧ ಪ್ರವೇಶಿಸುವಲ್ಲಿ ವಿಫಲವಾಗಿದ್ದವು ಎಂದು ಸ್ಮರಿಸಿದರು.

ಶಾಸಕರ ಮುಂದೆ ನಿರೀಕ್ಷೆಗಳು ಇವೆ. ಅಮೆರಿಕದಲ್ಲಿ ಇದ್ದವರು ತಂದೆಯ ಚಳವಳಿಗೆ ಪೂರಕವಾಗಿ ಕೆಳೆದ ಚುನಾವಣೆಯಲ್ಲಿ ಭಾರತಕ್ಕೆ ಬಂದರು ಈ ಬಾರಿ ಮೇಲುಕೋಟೆ ಜನ ಅವರನ್ನು ಗೆಲ್ಲಿಸಿ ಅನೇಕ ಅಭಿವೃದ್ಧಿಯ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರ ಜತೆಗೆ ರೈತ, ದಲಿತ, ಜನಪರ ಚಳುವಳಿಗಳ ನಿರೀಕ್ಷೆಗೆ ತಕ್ಕಂತೆ ವಿಧಾನ ಸೌಧದಲ್ಲಿ ಕೆಲಸ ಮಾಡಬೇಕಾದ ಜವಾಬ್ದಾರಿ ಇದೆ. ದರ್ಶನ್‌ ಪುಟ್ಟಣ್ಣಯ್ಯ ವಿಧಾನ ಸೌಧಕ್ಕೂ ರೈತರ, ದುಡಿಯುವ ವರ್ಗದ ಜನರ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಬೆಟ್ಟಯ್ಯ ಕೋಟೆ ಮಾತನಾಡಿ, ಪ್ರಜಾ ಪ್ರಭುತ್ವದಲ್ಲಿ ಬದುಕಿನ ಜೊತೆ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸುವ ಜವಾಬ್ದಾರಿ ನಮ್ಮ ಮೇಲಿದೆ. ದರ್ಶನ್ ಪುಟ್ಟಣ್ಣಯ್ಯ ಅವರು ಚಳವಳಿಯ ಹಿನ್ನೆಲೆಯಲ್ಲಿ ರಾಜಕೀಯ ಪ್ರವೇಶಿಸಿದ್ದಾರೆ. ಪ್ರಗತಿಪರ ಆಲೋಚನೆಗಳಿರುವ ವ್ಯಕ್ತಿಗಳು, ರಾಜ್ಯದ ಪ್ರಗತಿಪರರು, ಜೀವ ಪರ ಹೋರಾಟಗಾರರು, ದೇಶದ ಶಾಂತಿ ಸೌಹಾರ್ದತೆ ಬಯಸುವವರು, ಶೋಷಿತ ಸಮುದಾಯದವರು ದರ್ಶನ್‌ ಪುಟ್ಟಣ್ಣಯ್ಯ ಅವರ ಜವಾಬ್ದಾರಿಯನ್ನು ಹೆಚ್ಚುಸುತ್ತಿದ್ದಾರೆ. ಇವರೆಲ್ಲರ ಆಶೋತ್ತರಗಳಿಗೆ ದರ್ಶನ್ ಪುಟ್ಟಣ್ಣಯ್ಯ ಅವರು ಸ್ಪಂಧಿಸಬೇಕು ಎಂದು ತಿಳಿಸಿದರು.

ಇದನ್ನು ಓದಿ:ನಾನು ಆರ್​ಎಸ್​ಸ್​ನ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ: ಶಾಸಕ ಹೆಚ್.ಡಿ. ತಮ್ಮಯ್ಯ

ABOUT THE AUTHOR

...view details