ಮೈಸೂರು :ನದಿಯಿಂದ ಗೃಹೋಪಯೋಗಿ ಬಳಕೆಗೆ ನೀರು ತರಲು ಹೋಗುತ್ತಿದ್ದ ಗ್ರಾಪಂ ಮಾಜಿ ಸದಸ್ಯ ಮಹದೇವನಾಯ್ಕ ಎಂಬುವರು ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸರಗೂರು ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದಲ್ಲಿ ಆನೆಗಳ ಹಾವಳಿ ವಿಪರೀತವಾಗುತ್ತಿದೆ. ಇಲ್ಲಿನ ಜನರು ಸಾವು-ಬದುಕಿನ ನಡುವೆ ಜೀವನ ನಡೆಸಬೇಕಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.
ಹಳೇ ಹೆಗ್ಗುಡಿಲಿನಲ್ಲಿ ಮಿತಿ ಮೀರಿದ ಆನೆ ಹಾವಳಿ ಆನೆಗಳ ಹೆಚ್ಚಾದ ಉಪಟಳದಿಂದ ಮಹಿಳೆಯರು ಹಾಗೂ ಮಕ್ಕಳು ಸಂಜೆಯಾಗುತ್ತಿದ್ದಂತೆ ಜಮೀನುಗಳತ್ತ ಹೋಗಲು ಭಯಪಡುತ್ತಾರೆ. ಕಾಡಾನೆಗಳನ್ನು ನಿಯಂತ್ರಿಸುವಂತೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರೂ, ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಬಂಡೀಪುರ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರೆ, ಅವರು ಸರಗೂರಿನ ಅರಣ್ಯ ಅಧಿಕಾರಿಗಳಿಗೆ ಹೇಳಿ ಎಂದು ಹೇಳುತ್ತಾರೆ.
ಸರಗೂರು ಅರಣ್ಯ ಇಲಾಖೆ ಅಧಿಕಾರಿಗಳು ನಾವು ಆನೆ ಕಾವಲುಗಾರರನ್ನು ಹಾಕಬಹುದು ಅಷ್ಟೇ, ಆ ವ್ಯಾಪ್ತಿ ನಮಗೂ ಬರುವುದಿಲ್ಲ ಎಂದು ಸಮಜಾಯಿಸಿ ನೀಡುತ್ತಾರೆ ಎಂದು ಗ್ರಾಮದ ಮುಖಂಡರು ಬೇಸರ ಹೊರ ಹಾಕಿದ್ದಾರೆ.
ಗ್ರಾಮದ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳಿಗೆ ತೊಂದರೆಯಾದರೆ ಓಡೋಡಿ ಬರುವ ಸರಗೂರು ಅರಣ್ಯ ಇಲಾಖೆ, ಅದೇ ಕಾಡು ಪ್ರಾಣಿಗಳು ಗ್ರಾಮದ ಜಮೀನುಗಳಿಗೆ ದಾಳಿ ಇಟ್ಟರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುವ ಮೂಲಕ ಬೇಜವಾಬ್ದಾರಿ ವರ್ತನೆ ತೋರಿಸುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಜನರು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ ಎಂದು ಗ್ರಾಮದ ಹಲವರು ಅರಣ್ಯ ಇಲಾಖೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ:ಬೈಕ್ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ : ಗಾಯಾಳು ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು