ಮಂಡ್ಯ:ಜಿಲ್ಲೆಯಲ್ಲಿ ನಗರಸಭೆ ಸೇರಿದಂತೆ 8 ನಗರ ಸ್ಥಳೀಯ ಸಂಸ್ಥೆಗಳಿವೆ. ಎಲ್ಲಾ ಸಂಸ್ಥೆಗಳಿಗೂ ಚುನಾವಣೆ ನಡೆದು ಹೊಸ ಸದಸ್ಯರು ಬಂದಿದ್ದಾರೆ. ಆದರೆ, ಮೀಸಲಾತಿ ಗೊಂದಲ ಎಲ್ಲರ ಕೈಕಟ್ಟಿ ಹಾಕಿದೆ. ಇತ್ತ ಅಧಿಕಾರವೂ ಇಲ್ಲದೆ, ಅತ್ತ ಅಭಿವೃದ್ಧಿ ಕಾರ್ಯಗಳು ನಡೆಯದೆ ಮೂಕ ಪ್ರೇಕ್ಷಕರಾಗಿ ಜನಗಳ ಹತ್ತಿರ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.
ಚುನಾವಣೆ ನಡೆದು ವರ್ಷ ಕಳೆದರೂ ಅಧಿಕಾರವಿಲ್ಲ.. ಕೈಕಟ್ಟಿ ಕುಳಿತ ಪುರಪಿತೃಗಳು..
ಸ್ಥಳೀಯ ಹಾಗೂ ನಗರಗಳ ಅಭಿವೃದ್ಧಿಗಾಗಿಯೇ ಸ್ಥಳೀಯ ಸಂಸ್ಥೆಗಳಿವೆ. ಆದರೆ, ಮಂಡ್ಯದಲ್ಲಿ ಚುನಾವಣೆ ನಡೆದು 11 ತಿಂಗಳು ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಡೆಯದೇ ಅಭಿವೃದ್ಧಿ ಕುಂಟಿತಗೊಂಡಿದೆ.
ಜಿಲ್ಲೆಯಲ್ಲಿ 6 ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯತ್ ಇದೆ. ಮೂರು ಪುರಸಭೆಗಳಿಗೆ ಚುನಾವಣೆ ನಡೆದು 11 ತಿಂಗಳು ಕಳೆದರೆ, 3 ಪುರಸಭೆಗಳಿಗೆ ಚುನಾವಣೆ ನಡೆದು 4 ತಿಂಗಳಾಗಿದೆ. ಅಂದರೆ ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಕೆಆರ್ಪೇಟೆ, ಪಾಂಡವಪುರ ಪಟ್ಟಣಗಳಲ್ಲಿ ಪುರಸಭೆ ಇದೆ. ಬೆಳ್ಳೂರು ಪಟ್ಟಣ ಪಂಚಾಯತ್ಗೆ ಚುನಾವಣೆ ನಡೆದು11ತಿಂಗಳು ಕಳೆದಿದೆ. ಆದರೆ, ಇನ್ನೂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿಗಳ ರಚನೆಯಾಗಿಲ್ಲ. ಹೀಗಾಗಿ ಕಾಮಗಾರಿಗಳು ನಡೆಯದೆ ಅಭಿವೃದ್ಧಿ ಕುಂಟಿತಗೊಂಡಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಗೊಂದಲ ನೇಮಕಕ್ಕೆ ತಡೆಯಾಗಿದೆ. ರಾಜ್ಯ ಸರ್ಕಾರ ಮನಸ್ಸು ಮಾಡಿದ್ದರೆ ನೇಮಕಾತಿ ಮುಗಿಯುತ್ತಿತ್ತು. ಆದರೆ, ಸರ್ಕಾರದ ನಿರಾಸಕ್ತಿ ನೇಮಕಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗ್ತಿದೆ. ನಾಗರಿಕರು ಮುಂದೆ ಬರುವ ಹೊಸ ಸರ್ಕಾರ ಆದ್ಯತೆಯ ಮೇರೆಗೆ ಮೊದಲು ಪುರಸಭೆ, ಪಟ್ಟಣ ಪಂಚಾಯತ್ ಅಧ್ಯಕ್ಷರ ಆಯ್ಕೆಗೆ ಮುಂದಾಗಬೇಕು. ಆ ಮೂಲಕ ನಗರಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂಬ ಮನವಿ ಮಾಡುತ್ತಿದ್ದಾರೆ.
TAGGED:
mandya_tmc