ಮಂಡ್ಯ: ಕಳೆದ ವರ್ಷ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಾಲ್ವರನ್ನು ಬಲಿ ಪಡೆದಿದ್ದ ಕಾಡಾನೆ ಮದ್ದೂರು ತಾಲೂಕಿನಲ್ಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ಆನೆಯನ್ನು ಸಕಲೇಶಪುರದಲ್ಲಿ ಸೆರೆ ಹಿಡಿದು ಕೌದಳ್ಳಿ ಅರಣ್ಯ ಪ್ರದೇಶಕ್ಕೆ ತಂದು ಬಿಡಲಾಗಿತ್ತು. ಈ ಆನೆ ಮತ್ತೊಂದು ಕಾಡಾನೆಯೊಂದಿಗೆ ಹಲಗೂರು ಸಮೀಪದ ನಂಜಾಪುರ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ಕಾಣಿಸಿಕೊಂಡಿತ್ತು.
ಮುತ್ತತ್ತಿ ಅರಣ್ಯ ಪ್ರದೇಶದ ಕಾಡಾನೆಗಳ ಜೊತೆ ಸೇರದ ಈ ಆನೆ, ಇಂದು ಬೆಳಗ್ಗೆ ಮದ್ದೂರು ತಾಲೂಕಿನ ಕೂಳಗೆರೆ ಸಮೀಪದ ಗದ್ದೆಯಲ್ಲಿಯೂ ಪ್ರತ್ಯಕ್ಷವಾಗಿದೆ. ತಕ್ಷಣ ಜಾಗೃತರಾದ ಅರಣ್ಯ ಇಲಾಖೆ ಸಿಬ್ಬಂದಿ, ದಿನಪೂರ್ತಿ ಊರಿನ ಸುತ್ತಲೂ ಕಾವಲು ಕಾಯುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಕಾಡಿಗೆ ಮರಳಿಸುವ ಪ್ಲಾನ್ ಮಾಡಿಕೊಂಡಿದ್ದಾರೆ.