ಕೊಪ್ಪಳ:ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿರುವ ರೆಸಾರ್ಟ್ ತೆರವಿಗೆ ಸುಪ್ರಿಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ತೆರವುಗೊಳಿಸುವಂತೆ ರೆಸಾರ್ಟ್ ಮಾಲೀಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ವಿರುಪಾಪುರಗಡ್ಡೆ ರೆಸಾರ್ಟ್ಗಳ ತೆರವಿಗೆ ಡಂಗೂರ ಸಾರಿ ನೋಟಿಸ್ ನೀಡಿದ ಅಧಿಕಾರಿಗಳು
ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿರುವ ರೆಸಾರ್ಟ್ ತೆರವಿಗೆ ಸುಪ್ರಿಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ತೆರವುಗೊಳಿಸುವಂತೆ ರೆಸಾರ್ಟ್ ಮಾಲೀಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಹಂಪಿ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ಪಿ. ಎನ್. ಲೋಕೇಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮೋತಿಲಾಲ್ ಲಮಾಣಿ, ಗಂಗಾವತಿ ತಹಸೀಲ್ದಾರ್ ಚಂದ್ರಕಾಂತ್, ತಾಲೂಕು ಪಂಚಾಯಿತಿ ಇಒ ಡಾ. ಮೋಹನ್ ಅವರನ್ನೊಳಗೊಂಡ ಅಧಿಕಾರಿಗಳ ಹಾಗೂ ಸಿಬ್ಬಂದಿ ತಂಡ ಇಂದು ವಿರುಪಾಪುರಗಡ್ಡೆಗೆ ತೆರಳಿ ಡಂಗೂರ ಹೊಡೆಸಿ ಹಾಗೂ ನೋಟಿಸ್ ನೀಡುವ ಮೂಲಕ ರೆಸಾರ್ಟ್ ಮಾಲೀಕರಿಗೆ ರೆಸಾರ್ಟ್ ತೆರುವುಗೊಳಿಸುವಂತೆ ಸೂಚನೆ ನೀಡಿದರು.
ಅಲ್ಲದೇ, ಆನ್ಲೈನ್ ಮೂಲಕ ಪ್ರವಾಸಿಗರನ್ನು ಬುಕ್ಕಿಂಗ್ ಮಾಡಿಕೊಳ್ಳುವುದನ್ನು ನಿಲ್ಲಿಸುವುದು, ಬುಕಿಂಗ್ ಮಾಡಿಕೊಂಡಿದ್ದರೆ ಅದನ್ನು ರದ್ದುಪಡಿಸುವುದು ಮತ್ತು ಈಗಾಗಲೇ ರೆಸಾರ್ಟ್ಗಳಲ್ಲಿ ಉಳಿದುಕೊಂಡಿರುವ ಪ್ರವಾಸಿಗರನ್ನು ನಾಳೆಯೊಳಗೆ ಇತರ ಬೇರೆ ಕಡೆಯ ಹೋಟೆಲ್ಗಳಿಗೆ ಸ್ಥಳಾಂತರಿಸಲು ರೆಸಾರ್ಟ್ ಮಾಲೀಕರಿಗೆ ಸೂಚಿಸಿದರು. ಜೊತೆಗೆ, ಅಲ್ಲಿ ತಮ್ಮ ತಮ್ಮ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳು ರೆಸಾರ್ಟ್ ಮಾಲೀಕರಿಗೆ ಸೂಚನೆ ನೀಡಿದರು.