ಕುಷ್ಟಗಿ (ಕೊಪ್ಪಳ): ವಿಘ್ನ ನಿವಾರಕನ ಹಬ್ಬದ ಆಚರಣೆಯ ಭಕ್ತರ ಸಂಭ್ರಮಕ್ಕೆ ಕೊರೊನಾ ಬಿಕ್ಕಟ್ಟು ತಣ್ಣೀರೆರಚಿದಂತಾಗಿದೆ. ಕೊರೊನಾ ಆತಂಕದ ನಡುವೆಯೂ ಗಣೇಶೋತ್ಸವ ಆಚರಣೆಗೆ ಸರ್ಕಾರದ ಷರತ್ತಿನನ್ವಯ ಸಿದ್ಧತೆಗಳು ನಡೆದಿವೆ.
ಒಂದೆಡೆ ಕೊರೊನಾ ಆತಂಕ, ಇನ್ನೊಂದೆಡೆ ಹವಾಮಾನ ವೈಪರೀತ್ಯ ಇದ್ದರೂ ಕೊಪ್ಪಳದಲ್ಲಿ ಹಬ್ಬದ ಸಂಭ್ರಮಾಚರಣೆಗೆ ಕೊರತೆ ಇರಲಿಲ್ಲ. ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಸಂಘ ಸಂಸ್ಥೆಗಳು ಅಷ್ಟಾಗಿ ಆಸಕ್ತಿ ತೋರಿಸದೇ ಸಂಪ್ರದಾಯ ಕೈ ಬಿಡಬಾರದು ಎನ್ನುವ ನಂಬಿಕೆ ಹಿನ್ನೆಲೆಯಲ್ಲಿ ಎಲ್ಲವೂ ಸರಳ ಸಾಮಾನ್ಯವಾಗಿತ್ತು.
ಕುಷ್ಟಗಿಯಲ್ಲಿ ಹಬ್ಬದ ಆಚರ ಣೆ ಮನೆ ಮನೆಗಳಲ್ಲಿ ಕಳೆದ ಶುಕ್ರವಾರದಿಂದ ಮಾರುಕಟ್ಟೆಯಿಂದ ಗಣೇಶ ಮೂರ್ತಿಗಳನ್ನು ತರುವುದು, ಬಾಳೆದಿಂಡು, ಹೂ, ಹಣ್ಣು ದುಬಾರಿ ಎನಿಸಿದರೂ ಖರೀದಿ ಪ್ರಕ್ರಿಯೆ ಜೋರಾಗಿತ್ತು. ಶನಿವಾರವೂ ಗಣೇಶ ಮೂರ್ತಿ ಖರೀದಿ ಕಂಡು ಬಂತು. ಪಟ್ಟಣದ ಕೃಷ್ಣಗಿರಿ ಕಾಲೋನಿಯಲ್ಲಿ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಹಿರಿಯಜ್ಜಿ, ಲಕ್ಷ್ಮಿಬಾಯಿ ಚಿತ್ರಗಾರ ಅವರಲ್ಲಿ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿರುವುದು ಕಂಡು ಬಂತು.
ಇಂಜಿನಿಯರ್ ವೀರೇಶ ಬಂಗಾರಶೆಟ್ಟಿ ಅವರು ಈ ಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿ, ಕಳೆದ 10 ವರ್ಷಗಳಿಂದ ನಮ್ಮ ಮನೆಯಲ್ಲಿ ರಾಸಾಯನಿಕ ಬಣ್ಣ ರಹಿತ, ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಹಿರಿಯರ ಆಶಯವೂ ಮಣ್ಣಿನ ಗಣೇಶ ಮೂರ್ತಿ ಪೂಜಿಸುವುದಾಗಿದೆ. ಆದರೆ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ಆಕರ್ಷಣೆಗೆ ಖರೀದಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಹಿರಿಯರ ಆಶಯ ಉಳಿಸಬೇಕೆಂದರೆ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಸರ್ಕಾರದ ಉದ್ದೇಶವೂ ಇದೆ ಆಗಿದೆ ಎಂದರು.