ಕುಷ್ಟಗಿ(ಕೊಪ್ಪಳ): ಬಾಕಿ ವೇತನ ಹಾಗೂ ಇತರೆ ಬೇಡಿಕೆಗಳನ್ನು ಆಗಸ್ಟ್ 26ರ ಒಳಗೆ ಪೂರೈಸಬೇಕು. ಇಲ್ಲದಿದ್ದರೆ ಸೆಪ್ಟಂಬರ್ 1ರಿಂದ ಹಾಜರಿ ಹಾಕಿ, ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಬಿಎಸ್ಎನ್ಎಲ್ ದಿನಗೂಲಿ ನೌಕರರು ಎಚ್ಚರಿಕೆ ನೀಡಿದ್ದಾರೆ.
ಬಾಕಿ ವೇತನ ನೀಡುವಂತೆ ಬಿಎಸ್ಎನ್ಎಲ್ ದಿನಗೂಲಿ ನೌಕರರ ಆಗ್ರಹ 2019 ಜುಲೈ ತಿಂಗಳಿನಿಂದ 5 ತಿಂಗಳ ಬಾಕಿ ವೇತನ ಇದ್ದರೂ, ಕೆಲಸದಿಂದ ಏಕಾಏಕಿ ತೆಗೆದು ಹಾಕಿದ್ದರು. ಫೆಬ್ರುವರಿ 1 ರಿಂದ ಪುನಃ ಕೆಲಸಕ್ಕೆ ಕರೆದರು. ಈಗ 5 ತಿಂಗಳು ಕಳೆದರೂ ಯಾವುದೇ ವೇತನ ನೀಡುತ್ತಿಲ್ಲ. ಒಟ್ಟು 10 ತಿಂಗಳ ಬಾಕಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಭವಿಷ್ಯ ನಿಧಿ ಕಡಿತದೊಂದಿಗೆ ಪ್ರತಿ ತಿಂಗಳ ಸಿಗಬೇಕಿದ್ದ 9,300 ರೂಪಾಯಿ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಐವರು ದಿನಗೂಲಿಗಳಿಗೆ ಸಕಾಲಿಕ ವೇತನ ಹಾಗೂ ಬಾಕಿ ವೇತನ ಪಾವತಿಸುವಂತೆ ಎರಡು ಬಾರಿ ಸಂಸದ ಕರಡಿ ಸಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಜನೆಯಾಗಿಲ್ಲ ಎಂದು ದೂರಿದರು.
ಕೊರೊನಾದಂತಹ ಸಂಕಷ್ಟದಲ್ಲಿ ಕೆಲಸ ನಿರ್ವಹಿಸದ್ದೇವೆ. ಈಗ ಬಾಕಿ ವೇತನ ನೀಡದೇ ವಿಳಂಬ ಮಾಡಲಾಗುತ್ತಿದೆ. ಬಿಎಸ್ಎನ್ಎಲ್ ಇಲಾಖೆ ವಿರುದ್ಧ ಮಂಗಳವಾರ ಜೆಟಿಒ ಅವರಿಗೆ ಮನವಿ ನೀಡಲಾಗಿದೆ.
ದಿನಗೂಲಿ ನೌಕರರಾದ ನಾಗರಾಜ ಹುಣಿಸ್ಯಾಳ, ಉದಯಕುಮಾರ ತಳವಾರ, ತಿಮ್ಮಯ್ಯ ದಂಡಿನ್, ಕಳಕಪ್ಪ ಲಂಗಟದ್, ಶರಣಪ್ಪ ಶ್ಯಾಡಲಗೇರಿ ಇದ್ದರು.