ಕರ್ನಾಟಕ

karnataka

ಕೋಲಾರದಿಂದ 21 ಲಕ್ಷ ರೂ. ಮೌಲ್ಯದ ಟೊಮೆಟೊ ಸಾಗಿಸುತ್ತಿದ್ದ ಲಾರಿ ರಾಜಸ್ಥಾನದಲ್ಲಿ ಖಾಲಿಯಾಗಿ ಪತ್ತೆ

Tomato lorry missing case: ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ಟೊಮೆಟೊ ತುಂಬಿಕೊಂಡು ರಾಜಸ್ಥಾನದ ಜೈಪುರಕ್ಕೆ ತೆರಳುತ್ತಿದ್ದ ಲಾರಿ ಜಾಲಾರಿ ಎಂಬಲ್ಲಿ ಖಾಲಿಯಾಗಿ ಪತ್ತೆಯಾಗಿದೆ.

By

Published : Jul 31, 2023, 10:58 AM IST

Published : Jul 31, 2023, 10:58 AM IST

Updated : Jul 31, 2023, 5:28 PM IST

lorry-loaded-with-tomatoes-went-missing-case-registered
ಟೊಮೆಟೋ ತುಂಬಿಕೊಂಡು ಹೋಗುತ್ತಿದ್ದ ಲಾರಿ ನಾಪತ್ತೆ : ಪ್ರಕರಣ ದಾಖಲು

ಕೋಲಾರ :ನಗರದ ಎಪಿಎಂಸಿ ಮಾರುಕಟ್ಟೆಯಿಂದ ಟೊಮೆಟೊ ತುಂಬಿ ಜೈಪುರಕ್ಕೆ ಕಳುಹಿಸಿದ್ದ ಲಾರಿ ರಾಜಸ್ಥಾನದ ಜಾಲಾರಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಸುಮಾರು 21 ಲಕ್ಷ ರೂ. ಮೌಲ್ಯದ 750 ಬಾಕ್ಸ್ ಟೊಮೆಟೊದೊಂದಿಗೆ ಕಳುಹಿಸಲಾಗಿದ್ದ ಲಾರಿ ನಾಪತ್ತೆಯಾಗಿತ್ತು.

ಘಟನೆಯ ವಿವರ:ಕೋಲಾರ ಎಪಿಎಂಸಿ ಮಾರುಕಟ್ಟೆಯ ಎ.ಜಿ ಟ್ರೇಡರ್ಸ್​ನ ಸಕ್ಲೇನ್​ ಹಾಗೂ ಎಸ್​.ವಿ.ಟಿ ಟ್ರೇಡರ್ಸ್​ನ ಮುನಿರೆಡ್ಡಿ ಎಂಬುವರು ಸುಮಾರು 750 ಬಾಕ್ಸ್ ಟೊಮೆಟೊವನ್ನು ಜುಲೈ 27ರಂದು ಜೈಪುರಕ್ಕೆ ಮೆಹತ್​ ಟ್ರಾನ್ಸ್​ಪೋರ್ಟ್​ಗೆ ಸೇರಿದ್ದ ಲಾರಿಯೊಂದರಲ್ಲಿ ಕಳುಹಿಸಿದ್ದರು. ಲಾರಿಯು ಭಾನುವಾರ ರಾತ್ರಿ ಜೈಪುರಕ್ಕೆ ತಲುಪಬೇಕಿತ್ತು. ಆದರೆ ಭಾನುವಾರ ಸಂಜೆಯಿಂದ ಲಾರಿ ಹಾಗೂ ಚಾಲಕ ಅನ್ವರ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮೆಹತ್​ ಟ್ರಾನ್ಸ್​ಪೋರ್ಟ್​ ಮಾಲೀಕ ಸಾದಿಕ್​ ಅವರಿಗೂ ಲಾರಿ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಈ ಬಗ್ಗೆ ಎಪಿಎಂಸಿ ವರ್ತಕರು ಕೋಲಾರ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಲಾರಿ ಚಾಲಕನಿಂದ ಟೊಮೆಟೊ ಮಾರಾಟ:ಲಾರಿ ಚಾಲಕ ಅನ್ವರ್ ಯಾರ ಸಂಪರ್ಕಕ್ಕೂ ಸಿಗದೆ ಲಾರಿಯೊಂದಿಗೆ ಪರಾರಿಯಾಗಿದ್ದು, ಟೊಮೆಟೊ ಮಾರಾಟ ಮಾಡಿರುವುದಾಗಿ ಪೊಲೀಸ್​ ತನಿಖೆಯಿಂದ ತಿಳಿದು ಬಂದಿದೆ. ಕೋಲಾರದಿಂದ ರಾಜಸ್ಥಾನಕ್ಕೆ ಹೋಗಬೇಕಿದ್ದ ಟೊಮೆಟೊವನ್ನು ಗುಜರಾತ್​ನ ಅಹ್ಮದಾಬಾದ್​​ನಲ್ಲಿ ಪ್ರಕಾಶ್ ಎಂಬುವರಿಗೆ ಮಾರಾಟ ಮಾಡಿದ್ದಾನೆ. ಬಳಿಕ ರಾಜಸ್ಥಾನದ ಜಾಲಾರಿ ಎಂಬಲ್ಲಿ ಲಾರಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಗೊತ್ತಾಗಿದೆ. ಈಗಾಗಲೇ ಘಟನೆ ಸಂಬಂಧ ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್ ಮಾಲೀಕ ಸಾಧಿಕ್ ಗುಜರಾತ್​ಗೆ ತೆರಳಿದ್ದಾರೆ. ಸದ್ಯ ಲಾರಿ ಮಾಲೀಕರು ಗುಜರಾತ್​ನ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ದಾಖಲಿಸಿದ್ದಾರೆ.

ಕೋಲಾರ ಎಪಿಎಂಸಿಯು ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾಗಿದೆ. ಇಲ್ಲಿಂದ ದೇಶದ ಹಲವು ರಾಜ್ಯಗಳಿಗೆ ಟೊಮೆಟೊ ರವಾನೆಯಾಗುತ್ತದೆ. ಈಗಂತೂ ಟೊಮೆಟೊ ಬೆಲೆ ಗಗನಕ್ಕೇರಿರುವುದರಿಂದ ಕೋಲಾರದ ಎಪಿಎಂಸಿ ಮಾರುಕಟ್ಟೆಯ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮಂಡಿ ಮಾಲೀಕರು ಖಾಸಗಿ ಭದ್ರತೆಯ ಜೊತೆಗೆ ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಿಕೊಂಡಿದ್ದಾರೆ.

ಲಾರಿ ಸಂಖ್ಯೆ RJ-04-GC-3756 ಮೂಲಕ ಜೈಪುರಕ್ಕೆ ಟೊಮೆಟೊ ಸಾಗಿಸಲಾಗಿತ್ತು. ಭಾನುವಾರ ರಾತ್ರಿ ಜೈಪುರ್​ಗೆ ತಲುಪಬೇಕಿತ್ತು. ಆದರೆ ನಿನ್ನೆ ಮಧ್ಯಾಹ್ನದವರೆಗೂ ಸಂಪರ್ಕದಲ್ಲಿದ್ದ ಚಾಲಕ​ ಅನ್ವರ್​ ರಾತ್ರಿಯಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ವಾಹನ ಅಪಘಾತವಾಗಿದ್ದರೆ ಅಥವಾ ಬೇರೆ ಏನಾದ್ರೂ ಸಮಸ್ಯೆ ಆಗಿದ್ದರೆ ನಮಗೆ ಮಾಹಿತಿ ಬರುತ್ತಿತ್ತು ಎಂದು ವರ್ತಕರು ಹೇಳಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ಕಳ್ಳನೊಬ್ಬ ಟೊಮೆಟೊ ತುಂಬಿದ್ದ ಬಾಕ್ಸ್​ ಕಳ್ಳತನ ಮಾಡಿದ್ದ.

ಇದನ್ನೂ ಓದಿ :Bengaluru crime: ಟೊಮೆಟೋ ತುಂಬಿದ ಗೂಡ್ಸ್ ವಾಹನ‌ ಕದ್ದೊಯ್ದಿದ್ದ ದಂಪತಿ ಬಂಧನ

Last Updated : Jul 31, 2023, 5:28 PM IST

ABOUT THE AUTHOR

...view details