ಕೊಡಗು:ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಂಭವಿಸುತ್ತಿರುವ ಪ್ರಕೃತಿ ವಿಕೋಪಕ್ಕೆ ಸಾಕಷ್ಟು ಕಷ್ಟ ನಷ್ಟ ಉಂಟಾಗಿದೆ. ಆದರೆ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ನಷ್ಟದ ಪ್ರಮಾಣ ಸ್ವಲ್ಪ ಕಡಿಮೆಯೆಂದು ಹೇಳಬಹುದು. ಆದ್ರೆ, ಹಿಂದಿನ ವರ್ಷಗಳಲ್ಲಿ ಸರ್ಕಾರ ಘೋಷಿಸಿದ ಪರಿಹಾರ ಸಂತ್ರಸ್ಥರಿಗೆ ಸಿಕ್ಕಿದೆಯೇ?.
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಿಂದ ನಿರಂತರವಾಗಿ ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಒಂದೆಡೆ ಜೀವಹಾನಿ ಮತ್ತೊಂದೆಡೆ, ಆಸ್ತಿ-ಪಾಸ್ತಿ ನಷ್ಟ. ಇನ್ನೊಂದೆಡೆ ಗುಡ್ಡ ಕುಸಿತದಂಥ ಘಟನೆಗಳ ಪರಿಣಾಮ ಸಾವಿರಾರು ಕುಟುಂಬಗಳು ಸಂತ್ರಸ್ಥರಾಗಿ ಜೀವನ ಸಾಗಿಸುತ್ತಿದ್ದಾರೆ. ಪ್ರತೀ ವರ್ಷ ಅಧಿಕಾರಿಗಳು ನಷ್ಟದ ಅಂದಾಜು ಮಾಡುವುದು, ಸಂತ್ರಸ್ಥರ ಗೋಳು ಕೇಳುವುದು, ಪರಿಹಾರ ನೀಡುವುದನ್ನು ಮಾಡುತ್ತಿದ್ದಾರೆ. ಈ ಬಾರಿ ಸುಮಾರು 14 ಕಡೆಗಳಲ್ಲಿ ಭೂಕುಸಿತವಾದರೆ, 62 ಸ್ಥಳಗಳನ್ನು ಪ್ರವಾಹಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಸಲ ಅಂದಾಜು 500 ಕೋಟಿ ರೂ ನಷ್ಟವುಂಟಾಗಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.