ಕಲಬುರಗಿ:ಯುವಕ-ಯುವತಿಇಬ್ಬರೂ ಪ್ರೀತಿಸಿನಗರದ ರಾಮತೀರ್ಥ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೀಗ ಅವರ ಬದುಕು ಅತಂತ್ರವಾಗಿದೆ. ಇವರ ಪ್ರೀತಿಗೆ ಯುವತಿ ಪೋಷಕರು ವಿಲನ್ ಆಗಿದ್ದಾರೆ. ಹೀಗಾಗಿ, ಜೀವ ಭಯದಲ್ಲಿರುವ ಪ್ರೇಮಿಗಳು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಸೆಕೆಂಡ್ ಸೆಮಿಸ್ಟರ್ ಓದುತ್ತಿದ್ದ ಸಹನಾ ಮತ್ತು ಬಿಕಾಂ ಮುಗಿಸಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದ ಸಚಿನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪೋಷಕರು ಎಷ್ಟೇ ಬುದ್ಧಿವಾದ ಹೇಳಿದರೂ ಪ್ರೀತಿ ಮುಂದುವರಿಸಿದ್ದು ಸಹನಾಳನ್ನು ಆಕೆಯ ಪೋಷಕರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿರುವ ಅಜ್ಜನ ಮನೆಯಲ್ಲಿ ಬಿಟ್ಟಿದ್ದಾರೆ. ನಂತರ, ಸಚಿನ್ನನ್ನು ಊರಿಗೆ ಕರೆಸಿಕೊಂಡು ಅಲ್ಲಿಂದ ಇಬ್ಬರೂ ಓಡಿ ಹೋಗಿ, ಆಗಸ್ಟ್ 15 ರಂದು ಕಲಬುರಗಿಯ ರಾಮತೀರ್ಥ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.