ಕಲಬುರಗಿ:ರಾಜ್ಯವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ದಾಖಲಾತಿ ಇಲ್ಲದ ಕೋಟ್ಯಂತರ ಹಣ ಹರಿದಾಡುತ್ತಿದೆ. ಜೇವರ್ಗಿ, ಕಮಲಾಪುರ ತಾಲೂಕಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.90 ಕೋಟಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಗರಳ್ಳಿ ಕ್ರಾಸ್ ಚೆಕ್ಪೊಸ್ಟ್ಸಮೀಪ 50 ಲಕ್ಷ, ಕಿಣ್ಣಿ ಸಡಕ್ ಚೆಕ್ಪೋಸ್ಟ್ ಬಳಿ 1.40 ಕೋಟಿ ರೂಪಾಯಿ ನಗದು ಸಿಕ್ಕಿದೆ.
ಯಾದಗಿರಿಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋ ವಾಹನ ತಪಾಸಣೆ ಮಾಡಿದಾಗ 50 ಲಕ್ಷ ಹಣ ದೊರೆತಿದೆ. ಯಾದವ್ ಎಂಬ ವ್ಯಕ್ತಿ ದಾಖಲೆ ಇಲ್ಲದೇ ಹಣ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಅದರಂತೆ, ಕಿಣ್ಣಿ ಸಡಕ್ ಚೆಕ್ಪೊಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ 1.40 ಕೋಟಿ ನಗದು ದೊರೆತಿದೆ.
ಐಷಾರಾಮಿ ಕಾರಿನಲ್ಲಿ ಹಣ ಪತ್ತೆ:ಜಿಲ್ಲಾ ಪೊಲೀಸರು ಚೆಕ್ಪೋಸ್ಟ್ಗಳಲ್ಲಿ ವಾಹನ ತಪಾಸಣೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಅಕ್ರಮವಾಗಿ ಹಣ ಸಾಗಾಟ ಮಾಡುವವರ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ನಿನ್ನೆ ತಪಾಸಣೆ ವೇಳೆ ದಾಖಲೆ ಇಲ್ಲದಿರುವ ಸುಮಾರು 17 ಲಕ್ಷ 50 ಸಾವಿರ ಹಣ ಪತ್ತೆಯಾಗಿದೆ.
ಗದಗ ತಾಲೂಕಿನ ದೂಂಡೂರ ಚೆಕ್ ಪೋಸ್ಟ್ ಸಮೀಪ ವಾಹನಗಳ ತಪಾಸಣೆಯ ಸಂದರ್ಭದಲ್ಲಿ ಹಣ ಸಿಕ್ಕಿದೆ. ಗೋವಾದಿಂದ ಗದಗ ತಾಲೂಕಿನ ಕಳಸಾಪೂರ ಗ್ರಾಮಕ್ಕೆ ಹೊರಟಿದ್ದ ಆಡಿ ಕಾರಿನಲ್ಲಿ ದಾಖಲೆ ಇಲ್ಲದೇ ಹಣ ಸಾಗಿಸಲಾಗುತ್ತಿತ್ತು. ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ವಿಶಿಷ್ಠ ಮಾಹಿತಿ ನೀಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.