ಕರ್ನಾಟಕ

karnataka

By

Published : Aug 6, 2021, 8:18 PM IST

ETV Bharat / state

ಜಾರಕಿಹೊಳಿ ಮನೆಯಲ್ಲಿ ಕೆಲ ಶಾಸಕರು ಸೇರಿದ್ದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ; ಸಚಿವ ಬಿ ಸಿ ಪಾಟೀಲ್

ಐಪಿಎಸ್​ ಅಧಿಕಾರಿ ರವಿ ಡಿ ಚನ್ನಣ್ಣನವರ್ ಬಿಜೆಪಿಗೆ ಸೇರಲಿದ್ದಾರೆ ಎಂಬ ಗಾಳಿ ಸುದ್ದಿಗೆ ಪ್ರತಿಕ್ರಿಯಿಸಿದ ಪಾಟೀಲ್, ಅವರು ಅಧಿಕಾರದಲ್ಲಿರುವ ವ್ಯಕ್ತಿ. ಈ ಸಮಯದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತನಾಡುವುದು ತಪ್ಪು..

BC Patil Reacion About Confidential Meeting
ಅಧಿಕಾರಿಗಳೊಂದಿಗೆ ಬಿಸಿ ಪಾಟೀಲ್

ಹಾವೇರಿ :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಕೆಲ ಶಾಸಕರು ಸೇರಿದ್ದಕ್ಕೆ ಬೇರೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಸಚಿವ ಬಿ ಸಿ ಪಾಟೀಲ್ ಹೇಳಿದರು. ಜಿಲ್ಲೆಯ ನಾಗನೂರಲ್ಲಿ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಮಾತುಕತೆ ನಡೆಸುವುದು ಸಾಮಾನ್ಯ. ಇದಕ್ಕೆ ಅತೃಪ್ತರ ಸಭೆ ಎನ್ನುವುದು ತಪ್ಪು ಎಂದರು. ಆ ಮೂಲಕ ನಡೆದಿದೆ ಎನ್ನಲಾದ ರಹಸ್ಯ ಸಭೆಯ ಬಗ್ಗೆ ಕೇಳಿ ಬರುತ್ತಿರುವ ಪ್ರಶ್ನೆಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದರು.

ಅಧಿಕಾರಿಗಳೊಂದಿಗೆ ಸಚಿವ ಬಿ ಸಿ ಪಾಟೀಲ್

ಸಂಸದ ಶ್ರೀನಿವಾಸ್​ ಪ್ರಸಾದ್​ ಸಕ್ರೀಯ ರಾಜಕಾರಣದಿಂದ ನಿವೃತ್ತಿಯಾಗುತ್ತಿರುವುದು ಸರಿಯಲ್ಲ. ಅವರು ದೊಡ್ಡ ರಾಜಕಾರಣಿ. ಅವರ ಅನುಭವ, ಮಾರ್ಗದರ್ಶನ ರಾಜ್ಯಕ್ಕೆ ಬೇಕು. ಅವರು ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಪುನಾಃ ರಾಜಕಾರಣಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಐಪಿಎಸ್​ ಅಧಿಕಾರಿ ರವಿ ಡಿ ಚನ್ನಣ್ಣನವರ್ ಬಿಜೆಪಿಗೆ ಸೇರಲಿದ್ದಾರೆ ಎಂಬ ಗಾಳಿ ಸುದ್ದಿಗೆ ಪ್ರತಿಕ್ರಿಯಿಸಿದ ಪಾಟೀಲ್, ಅವರು ಅಧಿಕಾರದಲ್ಲಿರುವ ವ್ಯಕ್ತಿ. ಈ ಸಮಯದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತನಾಡುವುದು ತಪ್ಪು. ವೃತ್ತಿಗೆ ರಾಜೀನಾಮೆ ನೀಡಿ ಬಂದ ನಂತರ ಈ ರೀತಿ ಚರ್ಚಿಸುವುದು ಸೂಕ್ತ ಎಂದು ವದಂತಿಗೆ ತೆರೆ ಎಳೆದರು.

ಅಧಿಕಾರಿಗಳೊಂದಿಗೆ ಸಚಿವ ಬಿ ಸಿ ಪಾಟೀಲ್

ಹಾವೇರಿ ಜಿಲ್ಲೆಯಲ್ಲಿ ನೆರೆ ಹಾವಳಿಗೆ ಬೆಳೆ ಹಾನಿಯಾಗಿದೆ. ನೂರಾರು ಮನೆಗಳು ಧರೆಗುರುಳಿವೆ. ಅಂತವರ ನೆರವಿಗೆ ಸರ್ಕಾರ ನಿಂತಿದ್ದು, ತಕ್ಷಣ ಪರಿಹಾರ ನೀಡಲಾಗುತ್ತಿದೆ. ಅಲ್ಲದೆ ಎನ್‌ಡಿಆರ್​ಎಫ್ ಹಾಗೂ ಎಸ್‌ಟಿಆರ್‌ಎಫ್ ಮಾನದಂಡಗಳ ಮೇಲೆ ಪರಿಹಾರ ನೀಡುವುದಾಗಿ ಪಾಟೀಲ್ ತಿಳಿಸಿದರು.

ಇದಕ್ಕೂ ಮುನ್ನ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಶಾಸಕ ನೆಹರು ಓಲೆಕಾರ್ ನಿವಾಸಕ್ಕೆ ಭೇಟಿ ನೀಡಿದ ನೂತನ ಸಚಿವ ಬಿ ಸಿ ಪಾಟೀಲ್,​ ಅವರ ಜೊತೆ ಚರ್ಚೆ ನಡೆಸಿದರು. ಭೇಟಿ ಬಳಿಕ ಅಲ್ಲಿ ಸೇರಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಹಾಗೂ ಓಲೆಕಾರ್ ನಡುವೆ ನಡೆದ ಮಾತುಕತೆಯ ಬಗ್ಗೆ ವಿವರಣೆ ನೀಡಿದರು.

ಅಧಿಕಾರಿಗಳೊಂದಿಗೆ ಸಚಿವ ಬಿ ಸಿ ಪಾಟೀಲ್

ಸಚಿವ ಸ್ಥಾನ ಸಿಗದ್ದಕ್ಕೆ ನೆಹರು ಓಲೆಕಾರ್ ಅವರ ಮನೆಗೆ ಸೌಜನ್ಯದ ಭೇಟಿ ಮಾಡಿದ್ದೇನೆ. ಓಲೇಕಾರರು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದವರು. ಎಲ್ಲ ಅರ್ಹತೆ ಉಳ್ಳವರು. ಮೊನ್ನೆ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ ಆಗಿದೆ. ಬರುವ ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗಲಿದೆ ಎಂದು ಭರವಸೆ ನೀಡಿದರು.

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಎನ್​ ಮಹೇಶ್​ ಬಗ್ಗೆ ಮಾತನಾಡಿ, ಯಾರನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ. ಯಾರಿಗೂ ಬೆಲೆ ಕಟ್ಟಲು ಆಗುವುದಿಲ್ಲ. ಬಿಜೆಪಿ ಪಾರ್ಟಿಗೆ ಸೇರಿದವರನ್ನು ಖರೀದಿ ಮಾಡಿದ್ದಾರೆ ಅಂತಾ ಹೇಳುವುದು ಕಾಂಗ್ರೆಸ್ ಸಂಸ್ಕೃತಿ ಹೊರತು ಬಿಜೆಪಿ ಸಂಸ್ಕೃತಿಯಲ್ಲ ಎಂದರು. ಇದೇ ವೇಳೆ ಮುಂದಿನ ಮುಖ್ಯಮಂತ್ರಿ ರಾಷ್ಟ್ರವಾದಿ ಆಗುತ್ತಾರೆ ಎನ್ನುವ ನೂತನ ಸಚಿವ ಕೆ ಎಸ್ ಈಶ್ವರಪ್ಪರ ಹೇಳಿಕೆಗೂ ಬಿ ಸಿ ಪಾಟೀಲ್​ ಪ್ರತಿಕ್ರಿಯೆ ನೀಡಿದರು.

ರಾಜಕೀಯ ವಿದ್ಯಮಾನಗಳ ಕುರಿತಂತೆ ಸಚಿವ ಬಿ ಸಿ ಪಾಟೀಲ್ ಪ್ರತಿಕ್ರಿಯೆ ನೀಡಿರುವುದು..

ABOUT THE AUTHOR

...view details