ಹಾಸನ: ವಾರದ ಹಿಂದೆ ಅಪರಿಚಿತ ಮಹಿಳೆಯೊಬ್ಬಳನ್ನು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಿರೀಸಾವೆ ಹೋಬಳಿಯ ಎಂ.ಕಾಮನೆ ಘಟ್ಟ ಗ್ರಾಮದ ಬಳಿಯ ಆಲ್ಬೂರು ರಸ್ತೆ ಬದಿಯ ಕುರುಚಲು ಗಿಡಗಳ ಮಧ್ಯೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಹಣಕ್ಕಾಗಿ ಅಥವಾ ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗಗೊಳ್ಳಬೇಕಾಗಿದೆ.
ಮಹಿಳೆಗೆ 35ರಿಂದ 40 ವಯಸ್ಸು ಇರಬಹುದೆಂದು ಅಂದಾಜಿಸಲಾಗಿದೆ. ಇನ್ನು ಕೊಲೆಮಾಡಿರುವ ಆರೋಪಿಗಳು ಹಾಸಿಗೆಯಲ್ಲಿ ಮೃತದೇಹವನ್ನು ಸುತ್ತಿ ಕುರುಚಲ ಗಿಡಗಳ ಮಧ್ಯೆ ಎಸೆದು ಹೋಗಿದ್ದಾರೆ. ನಿನ್ನೆ ಸಂಜೆ ಸ್ಥಳೀಯರೊಬ್ಬರು ಆಲ್ಬೂರು ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ದುರ್ವಾಸನೆ ಬಂದ ಹಿನ್ನೆಲೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ. ಇನ್ನು ಎಸ್ಪಿ ನಂದಿನಿ, ಡಿವೈಎಸ್ಪಿ ಲಕ್ಷ್ಮೇಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.