ಹಾಸನ:ಜಿಲ್ಲೆಯ ದೊಡ್ಡಗದ್ದವಳ್ಳಿ ದೇವಾಲಯದಲ್ಲಿ ಕಾಳಿಕಾ ದೇವಿಯ ಮೂರ್ತಿ ಭಗ್ನಗೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಭದ್ರತಾ ಲೋಪವೇ ಮುಖ್ಯ ಕಾರಣವೆಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದ ವಿವಿಧ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ, ದೇವಾಲಯಕ್ಕೆ ಬೀಗ ಇರಲಿಲ್ಲ ಮತ್ತು ರಾತ್ರಿ ಕಾವಲುಗಾರರು ಸಹ ಇರಲಿಲ್ಲ ಎಂಬ ಮಾಹಿತಿ ಬಂದಿದೆ. ಅಲ್ಲದೇ ಸಿಸಿ ಕ್ಯಾಮರಾ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಭದ್ರತಾ ಲೋಪ ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.
ಕಾಳಿಕಾ ಮೂರ್ತಿ ಭಗ್ನ ಪ್ರಕರಣ ಕುರಿತು ಮಾತನಾಡಿದ ಜಿಲ್ಲಾದಿಕಾರಿ ಹಾಗೂ ಎಸ್ಪಿ ದೊಡ್ಡಗದವಳ್ಳಿಯ ಲಕ್ಷ್ಮೀ ಮತ್ತು ಕಾಳಿ ದೇವಾಲಯಕ್ಕೆ ಸುಮಾರು 906 ವರ್ಷಗಳ ಇತಿಹಾಸವಿದೆ. ಚತುಷ್ಕೂಟ ಮಾದರಿಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯ ದೇಶದಲ್ಲಿ ಎಲ್ಲಿಯೂ ಇಲ್ಲ ಎಂದು ಡಿಸಿ ಮಾಹಿತಿ ನೀಡಿದರು.
ಎಸ್ಪಿ ಶ್ರೀನಿವಾಸ ಗೌಡ ಮಾತನಾಡಿ, ಜಿಲ್ಲಾಧಿಕಾರಿಗಳು ಸೇರಿದಂತೆ ನಾನು ಕೂಡ ದೇವಾಯಲದ ಗರ್ಭಗುಡಿಯೊಳೆಗೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ಈ ಹಿಂದೆಯೇ ವಿಗ್ರಹ ಅಲುಗಾಡುತಿತ್ತು ಎಂಬ ಮಾಹಿತಿ ಇದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ. ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಕಾರಣ ಅವರೇ ಈ ಬಗ್ಗೆ ಗಮನಹರಿಸಬೇಕು. ಜೊತೆಗೆ ವಿಗ್ರಹಕ್ಕೆ ಯಾರಾದರೂ ಹಾನಿ ಮಾಡಿದ್ದಾರಾ ಎಂಬುದನ್ನು ಪರಿಶೀಲಿಸಬೇಕು. ಹಾಗೇನಾದರೂ ಮಾಡಿದ್ದರೇ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹೊಯ್ಸಳರ ಕಾಲದಲ್ಲಿ 1,113 ರಲ್ಲಿ ವಜ್ರದ ವ್ಯಾಪಾರಿಗಳಿಂದ ಕಟ್ಟಿಸಲ್ಪಟ್ಟ ದೊಡ್ಡಗದ್ದವಳ್ಳಿ ದೇವಾಲಯಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಈ ಅಪರೂಪದ ಭದ್ರಕಾಳಿಯ ವಿಗ್ರಹ ನೆಲಕ್ಕುರಳಿ ಮೂರು ಭಾಗಗಳಾಗಿತ್ತು. ಈ ಬಗ್ಗೆ ಭಾರತ ಪುನರುತ್ಥಾನ ಟ್ರಸ್ಟ್ ಪ್ರಧಾನಿ ಕಚೇರಿಗೆ ದೂರು ನೀಡಿತ್ತು. ದೂರಿನನ್ವಯ ಮಾಹಿತಿ ಕೇಳಿದೆ ಎನ್ನಲಾಗ್ತಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹಾಸನ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದೆ.