ಹಾಸನ: ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಮನುವಾದಿ ಬಿಜೆಪಿ ಸೋಲಿಸಿ ಈ ಚುನಾವಣೆಯಲ್ಲಿ ಜಾತ್ಯಾತೀತ ಪ್ರಜಾಪ್ರಭುತ್ವವಾದಿಗಳನ್ನು ದಲಿತ ಸಂಘರ್ಷ ಸಮಿತಿ ಬೆಂಬಲಿಸಲಿದೆ ಎಂದು ದಲಿತ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಪ್ಪ ಹೇಳಿದರು.
ಜಾತ್ಯಾತೀತ ಪ್ರಜಾಪ್ರಭುತ್ವ ವಾದಿಗಳಿಗೆ ನಮ್ಮ ಬೆಂಬಲ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಬಹುತ್ವ ಬುಡಮೇಲು ಮಾಡಲು ಮನುವಾದಿಗಳು ಅಸಮಾನತೆಯ ಸರ್ವಾಧಿಕಾರ ಹೇರಲು ಜನಸಂಘ ಹುಟ್ಟು ಹಾಕಿದರು. ಜನವಿರೋಧಿ ರಾಜಕೀಯ ಪಕ್ಷದ ಅಂಗಸಂಸ್ಥೆಗಳಾಗಿ ಆರ್ಎಸ್ಎಸ್ ಅಸ್ತಿತ್ವಕ್ಕೆ ಬಂದಿತು. ಸಂವಿಧಾನ ಬುಡಮೇಲು ಮಾಡಲು ಹವಣಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಈ ಚುನಾವಣೆಯಲ್ಲಿ ಜಾತ್ಯಾತೀತ ಪ್ರಜಾಪ್ರಭುತ್ವವಾದಿಗಳನ್ನು ಬೆಂಬಲಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಭಯಾನಕ ವಾತಾವರಣ ಸೃಷ್ಟಿಸಿದ್ದಾರೆ. ಆರ್ಎಸ್ಎಸ್ ಸ್ವಯಂ ಸೇವಕರಾಗಿರುವ ಅವರು ತಮ್ಮ ಮಾಲೀಕ ಮೋಹನ್ ಭಾಗವತ್ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಆರ್ಎಸ್ಎಸ್ ಆಜ್ಞೆ ಇಲ್ಲದೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ದೇಶದಲ್ಲಿ ಬ್ರಾಹ್ಮಣಶಾಹಿ, ಕೋಮುವಾದಿ ಹಿಂದುತ್ವದ ಫ್ಯಾಸಿಸ್ಟ್ ವ್ಯವಸ್ಥೆ ಸ್ಥಾಪಿಸುವುದೇ ಇವರ ರಾಜಕೀಯ ಮುಖವಾಡ ಎಂದು ಆರೋಪಿಸಿದರು.
ಚುನಾವಣಾ ಪೂರ್ವದಲ್ಲಿ ಮೋದಿ ಅವರು ನೀಡಿದ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವಿದೇಶಿ ಕಪ್ಪು ಹಣವನ್ನು ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ಹಾಕುವುದಾಗಿ ಬೊಬ್ಬೆ ಹಾಕಿದರು ನಯಾ ಪೈಸೆಯೂ ಖಾತೆಗೆ ಬರಲಿಲ್ಲ. ನಿರುದ್ಯೂಗಿಗಳಿಗೆ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಸುಳ್ಳು ಭರವಸೆ ನೀಡಿದರು ಎಂದು ದೂರಿದರು.