ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಒಂದು ತಿಂಗಳ ಅಂತರದಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ರೈತರ ಜಮೀನಿಗೆ ದಾಳಿ ಮಾಡಿರುವ ಆನೆಗಳು ಭತ್ತ, ಕಬ್ಬು, ಕಾಫಿ, ಮೆಣಸು ಸೇರಿ ಹಲವು ಬೆಳೆಗಳನ್ನು ಹಾನಿ ಮಾಡಿವೆ.
ಸಕಲೇಶಪುರ-ಆಲೂರು ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪ್ರತಿ ವರ್ಷವೂ ಕಾಡಾನೆಗಳ ಸಂತತಿ ಹೆಚ್ಚುತ್ತಿದೆ. ಹೀಗಾಗಿ ಇಂದಿನಿಂದ ಮೂರು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಹಾಗೂ ಒಂಟಿ ಸಲಗ ಸೆರೆ ಆಪರೇಷನ್ ಶುರುವಾಗಿದೆ. ಮತ್ತಿಗೋಡು ಕ್ಯಾಂಪ್ನಿಂದ ಅಭಿಮನ್ಯು, ಗಣೇಶ್, ಗೋಪಾಲಸ್ವಾಮಿ ಎಂಬ ಸಾಕಾನೆಗಳು ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.
ರೇಡಿಯೋ ಕಾಲರ್ ಅಳವಡಿಸಿರುವುದರಿಂದ ಆನೆ ಯಾವ ಭಾಗದಲ್ಲಿ ಓಡಾಡುತ್ತಿದೆ ಎಂಬುದು ತಿಳಿಯಲಿದೆ. ಅದರಿಂದ ಆ ಭಾಗದ ರೈತರು ಎಚ್ಚರಿಕೆಯಿಂದ ಇರಲು ಸೂಚಿಸಬಹುದಾಗಿದೆ.