ಹಾಸನ:ರೇವಣ್ಣನವರು ಪದೇ ಪೇದೆ ನನ್ನ ವಿಚಾರ ತೆಗೆದು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಅವರ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಹಾಸನಕ್ಕೆ ಮಾಜಿ ಸಚಿವ ಎಚ್ ಡಿ ರೇವಣ್ಣ, ಅವರ ಪತ್ನಿ ಭವಾನಿ ರೇವಣ್ಣ ಅಥವಾ ಅವರ ಕುಟುಂಬದಿಂದ ಯಾರಾದರು ಬಂದು ನನ್ನ ವಿರುದ್ಧ ಚುನಾವಣೆ ಎದುರಿಸಲಿ. ನಾನು ಚುನಾವಣೆಗೆ ಸಿದ್ಧನಾಗಿದ್ದೇನೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ದೇವೇಗೌಡರ ಕುಟುಂಬಕ್ಕೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಪ್ರೀತಂ ಗೌಡ 25 ಸಾವಿರ ಮತಗಳ ಅಂತರದಿಂದ ದೇವೇಗೌಡರ ಕುಟುಂಬವನ್ನು ಸೋಲಿಸುವ ಮೂಲಕ ಹಾಸನದಲ್ಲಿ ಮತ್ತೊಮ್ಮೆ ಶಾಸಕರಾಗುತ್ತಾರೆ ಎಂದು ದೇವೇಗೌಡರ ಕುಟುಂಬದ ಜ್ಯೋತಿಷ್ಯರೊಬ್ಬರು ಹೇಳಿದ್ದಾರಂತೆ. ಅದರಂತೆ ಅವರ ಕುಟುಂಬದಿಂದ ಯಾರೇ ನನ್ನ ವಿರುದ್ಧ ಸ್ಪರ್ಧೆಸಿದರು ನಾನು ಚುನಾವಣೆಗೆ ಸಿದ್ಧನಿದ್ದೇನೆ. ಯಾರನ್ನು ಗೆಲ್ಲಿಸಬೇಕೆಂದು ಜನರು ತೀರ್ಮಾನ ಮಾಡುತ್ತಾರೆ ಎಂದರು.