ಹಾಸನ: ಗ್ರಾಮಗಳಲ್ಲಿ ರಾತ್ರಿ ವೇಳೆ ಜಾನುವಾರು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹಾಸನದ ಶಾಂತಿಗ್ರಾಮ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಇಲಿಯಾಸ್ ಪಾಷಾ (28) ಕೊಡಗು ಜಿಲ್ಲೆ ಶಕೀರ್ ಅಲಿಯಾಸ್ ಅಸ್ಲಾಂ ಪಾಷ (20), ಇಬ್ರಾಹಿಂ ಬಿನ್ ಖಾದರ್ (23) ಮತ್ತು ಸುಮೀರ್ ಅಹಮದ್ ಅಲಿಯಾಸ್ ಸುಮು (28) ಅರುಣ್ ಅಲಿಯಾಸ್ ಜಯ (23) ಬಂಧಿತರು.
ಹಾಸನ ಜಿಲ್ಲಾ ವ್ಯಾಪ್ತಿಯ ಶಾಂತಿಗ್ರಾಮ, ಚನ್ನರಾಯಪಟ್ಟಣ, ಅರಕಲಗೂಡು, ಹಳ್ಳಿ ಮೈಸೂರು, ಶ್ರವಣಬೆಳಗೊಳ, ನುಗ್ಗೇಹಳ್ಳಿ, ಗಂಡಸಿ, ಬಾಣವಾರ, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನೂರಾರು ಕುರಿ, ಮೇಕೆಗಳ ಕಳ್ಳತನ ಮಾಡಿದ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು 18 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತನಿಖೆ ವೇಳೆ ಬಯಲಾಗಿದೆ.
ಬಂಧಿತ ಆರೋಪಿಗಳಿಂದ ₹3.10 ಲಕ್ಷ, 2 ಕಾರು ಮತ್ತು 2 ಕಬ್ಬಿಣದ ರಾಡುಗಳನ್ನ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿಯಾಗಿರುವ ಸಮೀರ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.