ಹಾಸನ: ಬೆಂಗಳೂರು-ಮಂಗಳೂರು ನಡುವಿನ ರೈಲ್ವೇ ಹಳಿ ಮೇಲೆ ಕುಸಿದು ಬಿದ್ದಿದ್ದ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದ್ದು ನಾಳೆಯಿಂದ ರೈಲು ಸಂಚಾರ ಪುನಾರಂಭವಾಗುವ ನಿರೀಕ್ಷೆಯಿದೆ.
ನಾಳೆ ಬೆಂಗಳೂರು-ಮಂಗಳೂರು ರೈಲು ಸಂಚಾರ ಮರು ಆರಂಭ ಸಾಧ್ಯತೆ
ಕಳೆದ 4-5 ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆಯಿಂದ ಬೆಂಗಳೂರು-ಮಂಗಳೂರು ನಡುವಿನ ಶಿರಾಡಿ ಘಾಟ್ ರೈಲು ಮಾರ್ಗದ ಸಿರಿಬಾಗಿಲು ಸಮೀಪದ ಮಣಿಭಂಡ ಬಳಿ ರೈಲು ಹಳಿಗಳ ಮೇಲೆ ಮಣ್ಣು ಕುಸಿದು ಬಿದ್ದಿತ್ತು. ಅಲ್ಲದೆ ಅಪಾಯಕಾರಿ ಬಂಡೆಯೂ ಹಳಿಗೆ ಉರುಳಿ ಬಿದ್ದಿತ್ತು. ಈ ಹಿನ್ನೆಲೆ ಎರಡು ದಿನಗಳಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು
ಮಣ್ಣು ತೆರವು ಕಾರ್ಯದಲ್ಲಿ ನಿರತವಾದ ರೈಲ್ವೇ ಸಿಬ್ಬಂದಿ
2 ದಿನಗಳಿಂದ ಸತತ ಕಾರ್ಯಾಚರಣೆ ನಡೆಸಿದ ರೈಲ್ವೇ ಸಿಬ್ಬಂದಿ, 6 ಹಿಟಾಚಿಗಳನ್ನು ಬಳಸಿಕೊಂಡು ಹಳಿ ಮೇಲೆ ಬಿದ್ದಿದ್ದ ಮಣ್ಣು ಮತ್ತು ಬಂಡೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಳೆಯ ಕಾರಣ ಪದೇ ಪದೇ ಹಳಿಗಳ ಮೇಲೆ ಮಣ್ಣು ಕುಸಿಯುತ್ತಿದ್ದರಿಂದ ಕಾರ್ಯಾಚರಣೆಗೆ ಅಡಚಣೆಯುಂಟಾಗಿತ್ತು. ಆದ್ದರಿಂದ ಮೊದಲು ಹಳಿ ಮೇಲೆ ಬಿದ್ದಿದ್ದ ಬಂಡೆ ಸುತ್ತಲಿನ ಮಣ್ಣು ತೆರೆವುಗೊಳಿಸುವ ಕಾರ್ಯವನ್ನು ರೈಲ್ವೆ ಇಲಾಖೆ ಸಿಬ್ಬಂದಿ ಮಾಡಿದ್ದರು. ಇಂದು ಮಧ್ಯಾಹ್ನ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದ್ದು, ನಾಳೆಯಿಂದ ರೈಲು ಸಂಚಾರ ಆರಂಭವಾಗುವ ಸಾಧ್ಯತೆಯಿದೆ.