ಚನ್ನರಾಯಪಟ್ಟಣ:(ಹಾಸನ):ಬಸ್ ಅಪಘಾತದಲ್ಲಿ ಸಹಾಯಕ ಆರಕ್ಷಕ ನಿರೀಕ್ಷಕ(ಎಎಸ್ಐ) ಸಾವಿಗೀಡಾಗಿರುವ ಘಟನೆ ಚನ್ನರಾಯಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮಂಜುನಾಥ್ (59) ಮೃತ ಪೊಲೀಸ್ ಅಧಿಕಾರಿ. ಪ್ರಸ್ತುತ ಚನ್ನರಾಯಪಟ್ಟಣ ಟೌನ್ ನಿವಾಸಿಯಾಗಿರುವ ಇವರು ಇತ್ತೀಚೆಗಷ್ಟೇ ಮುಂಬಡ್ತಿ ಪಡೆದು ಆರಕ್ಷಕ ಉಪ ನಿರೀಕ್ಷಕರಾಗಿ ಅರಸೀಕೆರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪ್ರತಿನಿತ್ಯ ಚನ್ನರಾಯಪಟ್ಟಣದಿಂದ ಅರಸೀಕೆರೆಗೆ ಪ್ರಯಾಣ ಬೆಳೆಸಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ನಿನ್ನೆ (ಶನಿವಾರ) ಕರ್ತವ್ಯ ಮುಗಿಸಿ ವಾಪಸ್ ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಇವರನ್ನು ಕೂಡಲೇ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.