ಹಾಸನ: ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆ ಇರುವ 2000 ವೈದ್ಯರು ಹಾಗೂ 1200 ದಾದಿಯರನ್ನು ನೇರ ನೇಮಕಾತಿ ಮೂಲಕ ತುಂಬಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಿ.ಶ್ರೀರಾಮುಲು, ಆರೋಗ್ಯ ಸಚಿವ ತಾಲೂಕಿನ ಹಿರೀಸಾವೆ ಸಮೀಪದ ಚಿಕ್ಕೋನಹಳ್ಳಿ ಸಾಯಿ ಮಂದಿರಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಸ್ಥಳೀಯವಾಗಿ ಸೇವೆ ಸಲ್ಲಿಸುವಂತಹ ವೈದ್ಯರಿಗೆ ಆಧ್ಯತೆ ನೀಡಲಾಗುವುದು. ಮುಂದಿನ ತಿಂಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುವುದರ ಜೊತೆಗೆ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿಯೂ ಒಂದು ದಿನ ಉಳಿದು ಸಮಸ್ಯೆ ಆಲಿಸುವುದಾಗಿ ತಿಳಿಸಿದರು. ಗ್ರಾಮೀಣ ಭಾಗದಲ್ಲಿ ವೈದ್ಯರು ಖಡ್ಡಾಯವಾಗಿ ಸೇವೆ ಸಲ್ಲಿಸುವ ಕಾನೂನು ಅನುಷ್ಠಾನಕ್ಕೆ ತರಲಾಗುವುದು. ಈಗಾಗಲೇ 6 ವರ್ಷಗಳ ಸೇವೆ ಕಡ್ಡಾಯವಿದ್ದು, ಅದನ್ನು ಸಮರ್ಪಕವಾಗಿ ಜಾರಿಗೆ ತರಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವ ಹಾಗೆ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದರು.
ನುಗ್ಗೇಹಳ್ಳಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರ ಕೊರತೆಯಿದ್ದು, ಸಮುದಾಯ ಆರೋಗ್ಯ ಕೇಂದ್ರದ ಕಾಮಾಗಾರಿ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಮಹಿಳೆಯೊಬ್ಬರು ಸಚಿವರಲ್ಲಿ ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಕೂಡಲೇ ಗಮನಹರಿಸಿ ವರದಿ ನೀಡಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಜನೌಷಧ ಕೇಂದ್ರಗಳಲ್ಲಿ ಎಲ್ಲಾ ತರಹದ ಔಷಧಿಗಳನ್ನು ಮಾರಾಟ ಮಾಡಬೇಕು. ಖಾಸಗಿ ಔಷಧಿಯಂಗಡಿಗೆ ರೋಗಿಗಳನ್ನ ಕಳುಹಿಸಬಾರದು ಎಂದು ಖಡಕ್ ಸೂಚನೆ ನೀಡಿದ್ರು. ಪಟ್ಟಣದ ಸಾರ್ವಜನಿಕ ತಾಲೂಕು ವೈದ್ಯಾಧಿಕಾರಿ ವಿ.ಮಹೇಶ್ ಕಟ್ಟಡದ ಸಮಸ್ಯೆ ವಿವರಿಸಿದಾಗ, ಆಸ್ಪತ್ರೆ ಕಟ್ಟಡಕ್ಕೆ ಬೇಕಾದಂತಹ ಹಣವನ್ನು ಶೀಘ್ರದಲ್ಲಿಯೇ ಮಂಜೂರು ಮಾಡಲಾಗುವುದು ಎಂದರು.
ವಾಲ್ಮೀಕಿ ಸಮುದಾಯದಿಂದ ಉಪ ಮುಖ್ಯಮಂತ್ರಿ ಆಗಬೇಕೆಂಬ ಬೇಡಿಕೆಯಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು ಅವರು, ಇದು ನಮ್ಮ ಕ್ಷೇತ್ರದ ಜನರ ಆಗ್ರಹವಾಗಿದೆ. ನಾನು ರಾಷ್ಟ್ರೀಯ ಪಕ್ಷದಲ್ಲಿ ಇರುವುದರಿಂದ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು. ವಾಲ್ಮೀಕಿ ಜನಾಂಗದ ಶೇ. 7.5 ರ ಮೀಸಲಾತಿ ಕುರಿತು ಮಾತನಾಡಿ, ವಾಲ್ಮೀಕಿ ಸಮುದಾಯದ ಸ್ವಾಮೀಜಿಯವರು ಸಮುದಾಯಕ್ಕೆ ಮೀಸಲಾತಿ ಖಡ್ಡಾಯ ಮಾಡಬೇಕೆಂದು ಆಗ್ರಹಿಸಿದ್ದರು. ಅವರ ಮನವಿ ಈ ಸರ್ಕಾರದ ಅವಧಿಯಲ್ಲಿ ಈಡೇರಲಿದೆ ಭರವಸೆ ನೀಡಿದರು.