ಹುಬ್ಬಳ್ಳಿ: ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದವರ ಬಗ್ಗೆ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ. ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನಗೆ ಕೊಡಿ, ಹೇಗೆ ಸರ್ಕಾರ ನಡೆಸಬೇಕು ಅನ್ನೋದು ತೋರಿಸುತ್ತೇನೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾಕುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಕೈಯಲ್ಲಿ ಸರ್ಕಾರ ಕೊಡಿ. ಗುಂಡು ಹೊಡೆಯುತ್ತೀನಿ. ಬಿಜೆಪಿ ನಿಮ್ಮಪ್ಪನದು ಅಲ್ಲ, ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿದ್ದೇವೆ. ರಾಜಕೀಯ ಈಗ ಮಾತನಾಡುವುದಿಲ್ಲ. ನಮ್ಮ ಶ್ರಮದಿಂದ ನೀವು ಅಧಿಕಾರ ಅನುಭವಿಸುತ್ತಿದ್ದೀರಿ. ಒಂದು ವರ್ಷದಿಂದ ಲೌಡ್ ಸ್ಪೀಕರ್ ವಿರುದ್ಧ ಹೋರಾಟ ಮಾಡ್ತಿದ್ದೀವಿ. ಇಲ್ಲಿಯವರೆಗೆ ಸುಪ್ರೀಂ ಆದೇಶ ಪಾಲನೆ ಮಾಡೋಕೆ ಆಗ್ತಿಲ್ಲ. ಸುಮಾರು 10ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಬೆಂಬಲ ನೀಡಿವೆ ಎಂದರು.
ಇದೇ ತಿಂಗಳು 8 ರಂದು ಬಿಜೆಪಿ ಶಾಸಕರ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ನೀಡಿದ 15 ಗಡುವು ಮುಗಿದು ಹೋಯಿತು. ಸರ್ಕಾರ ಏನ್ ಮಾಡ್ತಾಯಿದೆ. ಇಲ್ಲಿಯವರೆಗೂ ಯಾರು ಹೊಸ ಮೈಕ್ ಅನುಮತಿ ಪಡೆದಿಲ್ಲ. ಹಳೇ ಲೌಡ್ ಸ್ಪೀಕರ್ ಕೆಳಗಿಳಿಸಿಲ್ಲ. ನಿಮ್ಮಲ್ಲಿ ಆ ತಾಕತ್ತು ಧಮ್ ಇಲ್ಲ ಅನ್ನೋದು ಗೊತ್ತಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಮುತಾಲಿಕ್ ವಾಗ್ದಾಳಿ ನಡೆಸಿದರು.