ಹುಬ್ಬಳ್ಳಿ: ನೈರುತ್ಯ ರೈಲ್ವೆ ಒಂದಲ್ಲೊಂದು ರೀತಿಯಲ್ಲಿ ಜನಪರ ಕಾಳಜಿ ಹಾಗೂ ವಿನೂತನ ಪ್ರಯತ್ನಗಳ ಮೂಲಕ ಸುದ್ದಿಯಾಗುತ್ತಲೇ ಇದೆ. ಈಗ ಮತ್ತೊಂದು ಹೊಸ ಯೋಜನೆಯ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ವಿನೂತನ ಪ್ರಯತ್ನದತ್ತ ನೈರುತ್ಯ ರೈಲ್ವೆ ಇಲಾಖೆ: ಪ್ರಜ್ವಲಿಸಲಿದೆ ಸೌರಶಕ್ತಿ ಬೆಳಕು
ರೈಲ್ವೆ ಮತ್ತು ಉತ್ಪಾದನಾ ಘಟಕಗಳಲ್ಲಿ 2021-22ರ ವೇಳೆಗೆ ಸುಮಾರು 1,000 ಮೆಗಾವ್ಯಾಟ್ ಸೌರಶಕ್ತಿ, ಸುಮಾರು 200 ಮೆಗಾವ್ಯಾಟ್ ಪವನ ಶಕ್ತಿಯನ್ನು ಉತ್ಪಾದಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ. ಇದಕ್ಕಾಗಿ ನೈರುತ್ಯ ರೈಲ್ವೆ ಹುಬ್ಬಳ್ಳಿ, ಹೊಸಪೇಟೆ, ಗದಗ ಮತ್ತು ಬಳ್ಳಾರಿ ನಿಲ್ದಾಣಗಳ 7 ಸೇವಾ ಕಟ್ಟಡಗಳಲ್ಲಿ ಸೌರಶಕ್ತಿ ಸಂಗ್ರಹ ಮಾಡಲಾಗುತ್ತಿದೆ.
ಹೌದು, ರೈಲ್ವೆ ಮತ್ತು ಉತ್ಪಾದನಾ ಘಟಕಗಳಲ್ಲಿ 2021-22ರ ವೇಳೆಗೆ ಸುಮಾರು 1,000 ಮೆಗಾವ್ಯಾಟ್ ಸೌರಶಕ್ತಿ, ಸುಮಾರು 200 ಮೆಗಾವ್ಯಾಟ್ ಪವನ ಶಕ್ತಿಯನ್ನು ಉತ್ಪಾದಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದ್ದು, ಇದಕ್ಕಾಗಿ ನೈರುತ್ಯ ರೈಲ್ವೆಯೂ ತನ್ನ ವ್ಯಾಪ್ತಿಯಲ್ಲಿ ಸೌರಶಕ್ತಿಯ ‘ಬೆಳಕು’ಅನ್ನು ಪ್ರಜ್ವಲಿಸಲು ಸಿದ್ಧತೆ ಮಾಡಿಕೊಂಡಿದೆ. ಹುಬ್ಬಳ್ಳಿ, ಹೊಸಪೇಟೆ, ಗದಗ ಮತ್ತು ಬಳ್ಳಾರಿ ನಿಲ್ದಾಣಗಳ 7 ಸೇವಾ ಕಟ್ಟಡಗಳಲ್ಲಿ ಸೌರಶಕ್ತಿ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ ಸೌಧ, ಹುಬ್ಬಳ್ಳಿ ವಿಭಾಗೀಯ ಕಚೇರಿ, ವ್ಯವಸ್ಥಾಪಕರ ಕಚೇರಿ, ರೈಲ್ವೆ ಆಸ್ಪತ್ರೆ, ಲೆವೆಲ್ ಕ್ರಾಸಿಂಗ್ಗಳಲ್ಲಿ ವಿದ್ಯುತ್ ಉತ್ಪಾದನೆ ಪ್ರಕ್ರಿಯೆ ಜಾರಿಯಲ್ಲಿದೆ.
ನೈರುತ್ಯ ರೈಲ್ವೆ ಟ್ರ್ಯಾಕ್ನ ಅಕ್ಕಪಕ್ಕದ ಜಮೀನುಗಳಲ್ಲಿ ಮತ್ತು ಖಾಲಿ ಇರುವ ಭೂಮಿಯಲ್ಲಿ ಸೌರ ಸ್ಥಾವರಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಖಾಲಿ ಭೂಮಿಯಲ್ಲಿ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕಾರ್ಯಕ್ಕೆ ಟೆಂಡರ್ ಕೂಡ ನೀಡಲಾಗಿದೆ. ಸೌರಶಕ್ತಿ ಮತ್ತು ಪವನಶಕ್ತಿ ಮೂಲಕ ಉತ್ಪಾದಿಸಿದ ವಿದ್ಯುತ್ ಬಳಕೆ ಮಾಡಿದ್ದರಿಂದ ನೈರುತ್ಯ ರೈಲ್ವೆಗೆ ಕಳೆದ ವರ್ಷ 1.78 ಕೋಟಿ ವಿದ್ಯುತ್ ಬಿಲ್ ಉಳಿತಾಯವಾಗಿತ್ತು. ಈ ಸಲದ ಹಣಕಾಸು ವರ್ಷದಲ್ಲಿ 1.88 ಕೋಟಿ ಉಳಿತಾಯವಾಗುವ ನಿರೀಕ್ಷೆ ಇದೆ.