ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಮತದಾರ ಪ್ರಭು ಯಾವುದೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೇ ಆಡಳಿತ ಪಕ್ಷ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧವೂ ಸಾತ್ವಿಕ ಸಿಟ್ಟು ಹೊರ ಹಾಕಿದ್ದಾನೆ.
ಪಕ್ಷೇತರ ಅಭ್ಯರ್ಥಿಗಳ ಬೆಂಬಲವಿಲ್ಲದೇ ಅಧಿಕಾರದ ಗದ್ದುಗೆ ಏರಲು ಅಸಾಧ್ಯ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ಪಕ್ಷಗಳಿಂದ ಟಿಕೆಟ್ ಸಿಗದೆ ಕೆಲವರು ಬಂಡುಕೋರರಾಗಿ ಸ್ಪರ್ಧಿಸಿ ಜಯಗೊಳಿಸುವ ಮೂಲಕ ವಾರ್ಡ್ ಜನತೆ ತಮ್ಮ ಮೇಲಿಟ್ಟಿರುವ ವಿಶ್ವಾಸ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕಿಂಗ್ ಮೇಕರ್ಸ್ :ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳಿಗೆ ತೃಪ್ತಿಪಟ್ಟರೆ, ಕಾಂಗ್ರೆಸ್ 33 ಸ್ಥಾನಗಳಲ್ಲಿ 'ಕೈ'ಯೂರಲು ಸಾಧ್ಯವಾಗಿದೆ. ಮೇಯರ್ ಗದ್ದುಗೆ ಏರಲು 45 ಅಭ್ಯರ್ಥಿಗಳ ಬೆಂಬಲಬೇಕು. ಮೇಯರ್ ಆಯ್ಕೆಯಲ್ಲಿ ಮತದಾನ ಮಾಡುವ ವಿಶೇಷ ಹಕ್ಕು ಜನಪ್ರತಿನಿಧಿಗಳು ಹೊಂದಿರುತ್ತಾರೆ.
ಬಿಜೆಪಿಯ 5 ಜನಪ್ರತಿನಿಧಿಗಳು ಸೇರಿದರೂ ಕಮಲ ಪಕ್ಷಕ್ಕೆ 45ರ ಮ್ಯಾಜಿಕ್ ನಂಬರ್ ತಲುಪಲು ಒಂದು ಸ್ಥಾನದ ಕೊರತೆ ಇದೆ. ಹೀಗಾಗಿ, ಬಿಜೆಪಿಯ ಮೂವರು ಬಂಡಾಯ ಅಭ್ಯರ್ಥಿಗಳು ಸೇರಿದಂತೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರನ್ನು ತನ್ನತ್ತ ಸೆಳೆದುಕೊಂಡರೇ ಮಾತ್ರ ಬಿಜೆಪಿ ಅಧಿಕಾರ ಗಿಟ್ಟಿಸಿಕೊಂಡು ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿದೆ.