ಕರ್ನಾಟಕ

karnataka

ETV Bharat / state

ಹು-ಧಾ ಪಾಲಿಕೆ ಚುನಾವಣೆ ಅತಂತ್ರ ಫಲಿತಾಂಶ : ಯಾರಾಗ್ತಾರೆ ಕಿಂಗಮೇಕರ್!?

ಪಾಲಿಕೆಯಲ್ಲಿ ಉಂಟಾಗಿರುವ ಈ ಅತಂತ್ರ ಸ್ಥಿತಿಯಿಂದ ಹೊರ ಬರುವ ಮೂಲಕ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಸಾಕಷ್ಟು ಅವಕಾಶಗಳು ಇವೆಯಾದರೂ, ಬಿಜೆಪಿ ಪಾಲಿಗೆ ಈ ಚುನಾವಣೆಯ ಫಲಿತಾಂಶ ಮುಂದೆ ಎದುರಾಗಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್​​, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ..

By

Published : Sep 6, 2021, 6:36 PM IST

hubli dharawad  corporation  election result
ಹು-ಧಾ ಪಾಲಿಕೆ ಚುನಾವಣೆ ಅತಂತ್ರ ಫಲಿತಾಂಶ

ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಮತದಾರ ಪ್ರಭು ಯಾವುದೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೇ ಆಡಳಿತ ಪಕ್ಷ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧವೂ ಸಾತ್ವಿಕ ಸಿಟ್ಟು ಹೊರ ಹಾಕಿದ್ದಾನೆ.

ಪಕ್ಷೇತರ ಅಭ್ಯರ್ಥಿಗಳ ಬೆಂಬಲವಿಲ್ಲದೇ ಅಧಿಕಾರದ ಗದ್ದುಗೆ ಏರಲು ಅಸಾಧ್ಯ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ಪಕ್ಷಗಳಿಂದ ಟಿಕೆಟ್ ಸಿಗದೆ ಕೆಲವರು ಬಂಡುಕೋರರಾಗಿ ಸ್ಪರ್ಧಿಸಿ ಜಯಗೊಳಿಸುವ ಮೂಲಕ ವಾರ್ಡ್‌ ಜನತೆ ತಮ್ಮ ಮೇಲಿಟ್ಟಿರುವ ವಿಶ್ವಾಸ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕಿಂಗ್ ಮೇಕರ್ಸ್ :ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳಿಗೆ ತೃಪ್ತಿಪಟ್ಟರೆ, ಕಾಂಗ್ರೆಸ್ 33 ಸ್ಥಾನಗಳಲ್ಲಿ 'ಕೈ'ಯೂರಲು ಸಾಧ್ಯವಾಗಿದೆ. ಮೇಯರ್ ಗದ್ದುಗೆ ಏರಲು 45 ಅಭ್ಯರ್ಥಿಗಳ ಬೆಂಬಲಬೇಕು. ಮೇಯರ್ ಆಯ್ಕೆಯಲ್ಲಿ ಮತದಾನ ಮಾಡುವ ವಿಶೇಷ ಹಕ್ಕು ಜನಪ್ರತಿನಿಧಿಗಳು ಹೊಂದಿರುತ್ತಾರೆ.

ಬಿಜೆಪಿಯ 5 ಜನಪ್ರತಿನಿಧಿಗಳು ಸೇರಿದರೂ ಕಮಲ ಪಕ್ಷಕ್ಕೆ 45ರ ಮ್ಯಾಜಿಕ್ ನಂಬರ್ ತಲುಪಲು ಒಂದು ಸ್ಥಾನದ ಕೊರತೆ ಇದೆ. ಹೀಗಾಗಿ, ಬಿಜೆಪಿಯ ಮೂವರು ಬಂಡಾಯ ಅಭ್ಯರ್ಥಿಗಳು ಸೇರಿದಂತೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರನ್ನು ತನ್ನತ್ತ ಸೆಳೆದುಕೊಂಡರೇ ಮಾತ್ರ ಬಿಜೆಪಿ ಅಧಿಕಾರ ಗಿಟ್ಟಿಸಿಕೊಂಡು ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿದೆ.

ಅಸಾಧ್ಯದ ಮಾತು :ಕಾಂಗ್ರೆಸ್ ಹರಸಾಹಸಪಟ್ಟರೂ ಸಹ ಗದ್ದುಗೆ ಏರಲು ಸಾಧ್ಯವೇ ಇಲ್ಲ. ಯಾಕೆಂದರೆ, ಕಾಂಗ್ರೆಸ್ 33 ಸ್ಥಾನಗಳಿಸಿದ್ದರೇ ಎಐಎಂಐಎಂನ 3, ಜೆಡಿಎಸ್1, ಎರಡು ವಿಶೇಷ ಜನಪ್ರತಿನಿಧಿಗಳ ಮತ, ಮೂವರು ತಮ್ಮದೇ ಪಕ್ಷದ ಬಂಡಾಯಗಾರರನ್ನು ಸೇರಿಸಿದರೂ 42 ಸ್ಥಾನಗಳು ಆಗುತ್ತವೆ. ಹೀಗಾಗಿ, ಈ ಬಾರಿ ಹು-ಧಾ ಮಹಾನಗರ ಪಾಲಿಕೆ ಮೇಯರ್‌ಗಿರಿ ಕೈ ತಪ್ಪಲಿದೆ.

ಈ ಎಲ್ಲ ಆಯಾಮಗಳನ್ನು ಗಮನಿಸಿದಾಗ ಬಿಜೆಪಿ ಬಂಡಾಯ ಶಮನ ಮಾಡಿ ಎಲ್ಲರ ಮನವೊಲಿಸಿದಲ್ಲಿ ಮಾತ್ರವೇ ಗದ್ದುಗೆ ಏರಲು ಸಾಧ್ಯವಾಗಲಿದೆ. ಈ ಮಧ್ಯೆ ಕಮಲ ಪಾಳಯದಲ್ಲಿ ಗೌನ್ ಧರಿಸುವ ಆಕಾಂಕ್ಷಿಗಳು ಭಾರಿ ಕಸರತ್ತು ನಡೆಸಿದ್ದಾರೆನ್ನಲಾಗಿದೆ.

ಪಾಲಿಕೆಯಲ್ಲಿ ಉಂಟಾಗಿರುವ ಈ ಅತಂತ್ರ ಸ್ಥಿತಿಯಿಂದ ಹೊರ ಬರುವ ಮೂಲಕ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಸಾಕಷ್ಟು ಅವಕಾಶಗಳು ಇವೆಯಾದರೂ, ಬಿಜೆಪಿ ಪಾಲಿಗೆ ಈ ಚುನಾವಣೆಯ ಫಲಿತಾಂಶ ಮುಂದೆ ಎದುರಾಗಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್​​, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಇದನ್ನೂ ಓದಿ:ಬಿಜೆಪಿಗೆ ಸಿಹಿ.. ಎಂಇಎಸ್​ ಪಾಲಿಗೆ ಕುಂದಾ ಕಹಿ.. ಬೆಳಗಾವಿಯಲ್ಲಿ ಯಶಸ್ವಿಯಾದ ಕಮಲಪಾಳಯದ ತಂತ್ರ!

ABOUT THE AUTHOR

...view details