ಹುಬ್ಬಳ್ಳಿ:ನೈಋತ್ಯ ರೈಲ್ವೆ ವಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಎರಡು ತಿಂಗಳಿನಿಂದ ವೇತನ ನೀಡದಿರುವುದನ್ನು ಖಂಡಿಸಿ ನೈಋತ್ಯ ರೈಲ್ವೆ ನಿಲ್ದಾಣದ ಬಳಿ ಗುತ್ತಿಗೆ ನೌಕರರಿಂದ ಪ್ರತಿಭಟನೆ ನಡೆಸಲಾಯಿತು.
ವೇತನ ವಿಳಂಬವನ್ನು ಖಂಡಿಸಿ ಎಸ್ಡಬ್ಲೂಆರ್ ಗುತ್ತಿಗೆ ನೌಕರರ ಪ್ರತಿಭಟನೆ
ಸುಮಾರು ನಾಲ್ಕು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಎಸ್ಡಬ್ಲೂಆರ್ ನೌಕರರಿಗೆ ಎರಡು ತಿಂಗಳಿನಿಂದ ವೇತನ ದೊರೆಯದಾಗಿದ್ದು, ಬಾಕಿ ವೇತನ ಪಾವತಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.
ಸುಮಾರು ನಾಲ್ಕು ವರ್ಷಗಳಿಂದ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಎರಡು ತಿಂಗಳಿನಿಂದ ನಮಗೆ ವೇತನ ದೊರೆತಿಲ್ಲ. ಅಲ್ಲದೇ ಗುತ್ತಿಗೆದಾರರನ್ನು ಕೇಳಿದರೆ ಏಪ್ರಿಲ್ ಒಳಗೆ ಟೆಂಡರ್ ಮುಗಿದಿದೆ ಎಂದು ಹೇಳುತ್ತಿದ್ದಾರೆ. ಆದರೇ ಟೆಂಡರ್ ಇದುವರೆಗೂ ಮುಗಿದಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಈ ಬಗ್ಗೆ ಟೆಂಡರ್ ಪಡೆದುಕೊಂಡ ಮ್ಯಾನೇಜರ್ ಪ್ರತಿಕ್ರಿಯೆ ನೀಡಿ, ಲಾಕ್ಡೌನ್ ಹಿನ್ನೆಲೆಯಲ್ಲಿ ರೈಲ್ವೆ ಸಂಚಾರ ಬಂದ್ ಇರುವ ನಿಟ್ಟಿನಲ್ಲಿ ರೈಲ್ವೆಯವರು ನಮಗೆ ಹಣ ನೀಡಿಲ್ಲ. ಆದ್ದರಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವವರಿಗೆ ವೇತನ ನೀಡಲು ಸಾಧ್ಯವಾಗಿಲ್ಲ ಎನ್ನುತ್ತಿದ್ದಾರೆ.