ಕರ್ನಾಟಕ

karnataka

ETV Bharat / state

ನವಜಾತ ಶಿಶುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ: ನಾರಾಯಣ ಹೃದಯಾಲಯ ವೈದ್ಯರ ಸಾಧನೆ

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ನವಜಾತ ಶಿಶುವೊಂದಕ್ಕೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಧಾರವಾಡ ನಾರಾಯಣ ಹೃದಯಾಲಯದ ವೈದ್ಯರ ತಂಡ ಮಗುವಿಗೆ ಪುನರ್ಜನ್ಮ ನೀಡುವಲ್ಲಿ ಯಶಸ್ವಿಯಾಗಿದೆ.

By

Published : Oct 22, 2020, 2:41 PM IST

Dharwad Doctors
ನವಜಾತ ಶಿಶುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ತಂಡ

ಧಾರವಾಡ: ಹೃದಯ ಸಂಬಂಧಿ ಖಾಯಿಲೆ ಎಂದರೆ ಅದೆಷ್ಟೋ ಜನರು ಹೌಹಾರಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡವರಿಗೆ ಮಾತ್ರವಲ್ಲದೆ, ಚಿಕ್ಕ ಮಕ್ಕಳಲ್ಲೂ ಹೃದಯ ಖಾಯಿಲೆ ಕಾಣಿಸಿಕೊಳ್ಳತೊಡಗಿದೆ. ಅದರಲ್ಲೂ ನವಜಾತ ಶಿಶುಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡರೆ, ಮಗುವನ್ನು ರಕ್ಷಿಸುವುದು ಅತ್ಯಂತ ಕಷ್ಟಕರ. ಆದರೆ ಧಾರವಾಡದ ನಾರಾಯಣ ಹೃದಯಾಲಯದ ವೈದ್ಯರು ಮಹಾಪದಮನಿಯಲ್ಲಿ ದೋಷವಿದ್ದ ಶಿಶುವೊಂದಕ್ಕೆ ಹೊಸ ಬದುಕು ನೀಡಿದ್ದಾರೆ.

ನವಜಾತ ಶಿಶುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡ

ಗಂಭೀರ ಹೃದಯರೋಗದಿಂದ ಬಳಲುತ್ತಿದ್ದ 20 ದಿನದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶಿಶುವಿಗೆ ಮರು ಜನ್ಮ ನೀಡುವಲ್ಲಿ ಧಾರವಾಡದ ಎನ್​​ಹೆಚ್​​ ವೈದ್ಯರು ಸಫಲರಾಗಿದ್ದಾರೆ. ಹುಬ್ಬಳ್ಳಿ ಮೂಲದ ಈ ಶಿಶು ಹುಟ್ಟಿದಾಗ 2.3 ಕೆ.ಜಿ ತೂಕವಿತ್ತು. ಮಗುವಿನ ಹೃದಯದಲ್ಲಿ ರಕ್ತ ಪರಿಚಲನೆ ಸಮಸ್ಯೆ ಕಾರಣದಿಂದ ಧಾರವಾಡದ ನಾರಾಯಣ ಹಾರ್ಟ್ ಸೆಂಟರ್‌ಗೆ ಕರೆತರಲಾಗಿತ್ತು. ಮಗುವಿನ ತಪಾಸಣೆ ನಡೆಸಿದಾಗ ಮಹಾಪದಮನಿಯಲ್ಲಿ ದೊಡ್ಡ ಪ್ರಮಾಣದ ದೋಷಕಂಡು ಬಂದ ಹಿನ್ನೆಲೆ, ರಕ್ತ ಪರಿಚಲನೆ ಸಮಸ್ಯೆ ದೃಢಪಟ್ಟಿತ್ತು.

ಚಿಕ್ಕಮಕ್ಕಳ ಹೃದಯ ರೋಗ ತಜ್ಞ ಡಾ.ಅರುಣ ಕೆ. ಬಬ್ಲೇಶ್ವರ ಹಾಗೂ ವಯಸ್ಕರ ಹಾಗೂ ಹಿರಿಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ.ರವಿವರ್ಮ ಪಾಟೀಲ್ ಮತ್ತು ಹೃದಯ ಅರಿವಳಿಕೆ ತಜ್ಣರ ತಂಡ 2-ಡಿ ಎಕೋ ಕಾರ್ಡಿಯೋಗ್ರಫಿ ಮ‌ೂಲಕ ಪರೀಕ್ಷೆ ನಡೆಸಿದಾಗ ಮಗುವಿನ ಮಹಾಪದಮನಿಯಲ್ಲಿ ಶೇ. 65ರಷ್ಟು ತಡೆ ಇರುವುದು ಕಂಡು ಬಂದಿತ್ತು. ಈ ಹಿನ್ನೆಲೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಹಾಪದಮನಿಯಲ್ಲಿದ್ದ ಪ್ರಮುಖ ತಡೆಯನ್ನು ತೆರವುಗೊಳಿಸಿ ಅಘಾತ ಸ್ಥಿತಿಯಲ್ಲಿದ್ದ ಮಗು ತಕ್ಷಣ ಚೇತರಿಸಿಕೊಳ್ಳುವಂತೆ ಮಾಡಿ ಶಿಶುವಿನ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವೈದ್ಯರ ಕಾರ್ಯಕ್ಕೆ ಮಗುವಿನ ತಂದೆ, ತಾಯಿ ತೀವ್ರ ಸಂತೋಷ ವ್ಯಕ್ತಪಡಿಸಿದ್ದು, ಮನಃಪೂರ್ವಕವಾಗಿ ಧನ್ಯವಾದ ಅರ್ಪಿಸಿದ್ದಾರೆ.

ABOUT THE AUTHOR

...view details