ಹುಬ್ಬಳ್ಳಿ:ಬೆಂಗಳೂರಿನ ಮಿಂಟೋ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ 22 ಅಮಾಯಕ, ಬಡ ರೋಗಿಗಳ ದೃಷ್ಟಿಯನ್ನು ಶಾಶ್ವತವಾಗಿ ಇಲ್ಲವಾಗಿಸಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧಾರವಾಡ ಜಿಲ್ಲಾ ಕರವೇ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ಮಾಡಿದರು.
ವೈದ್ಯರ ವಿರುದ್ಧ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ
ಬಡ ರೋಗಿಗಳ ದೃಷ್ಟಿಯನ್ನು ಶಾಶ್ವತವಾಗಿ ಕಿತ್ತುಕೊಳ್ಳಲಾಗಿದೆ ಎಂದು ವೈದ್ಯರ ವಿರುದ್ಧ ಧಾರವಾಡ ಜಿಲ್ಲಾ ಕರವೇ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ಮಾಡಿದರು.
ಜುಲೈನಲ್ಲಿ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಚಿಕಿತ್ಸೆ ನಡೆದಿದ್ದು, ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದ 22 ಮಂದಿ ಬಡ ರೋಗಿಗಳು ಶಾಶ್ವತವಾಗಿ ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ಬಹುತೇಕರು ದುಡಿದ ಹಣದಿಂದಲೇ ಜೀವನ ಸಾಗಿಸುವವರಾಗಿದ್ದು, ಇದರಿಂದಾಗಿ ಅವರ ಮುಂದಿನ ಜೀವನ ಕತ್ತಲಾಗಿದೆ.
ಈ ಹಿನ್ನೆಲೆಯಲ್ಲಿ ಅವರಿಗೆ ಕೂಡಲೇ ಮಿಂಟೋ ಆಸ್ಪತ್ರೆಯ ಆಡಳಿತ ಮಂಡಳಿ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ರೋಗಿಗಳಿಗೆ ಸಹಾಯ ಮಾಡಬೇಕು. ಅಲ್ಲದೇ ಸರ್ಕಾರ ಇತ್ತ ಗಮನಹರಿಸಿ ಬಡವರ ರಕ್ಷಣೆ ಜೊತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.