ದಾವಣಗೆರೆ: ಅದು ಎರಡು ವರ್ಷಕ್ಕೊಮ್ಮೆ ನಡೆಯುವ ದಕ್ಷಿಣ ಕರ್ನಾಟಕದ ಐತಿಹಾಸಿಕ ಜಾತ್ರೆ. ಲಕ್ಷಾಂತರ ಜನ ಸೇರುವ ದಾವಣಗೆರೆ ದುರ್ಗಾಂಭಿಕ ದೇವಿಯ ಜಾತ್ರೆಯಲ್ಲಿ ದೀಡ್ ನಮಸ್ಕಾರ ಹಾಕಿದರೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಕಷ್ಟ ಎಂದು ದುರ್ಗಾಂಭಿಕ ದೇವಿಯನ್ನು ನಂಬಿ ಬರುವ ಪ್ರತಿಯೊಬ್ಬ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುತ್ತಾಳೆ ಎನ್ನುವ ನಂಬಿಕೆಯಿದೆ. ಹೀಗಾಗಿ ಈ ಜಾತ್ರೆಗೆ ಲಕ್ಷಾಂತರ ಭಕ್ತರು ರಾಜ್ಯಾದ್ಯಂತ ಆಗಮಿಸುತ್ತಾರೆ.
ದಾವಣಗೆರೆ ದುಗ್ಗಮ್ಮ ಜಾತ್ರೆಗೆ ಹರಿದು ಬಂದ ಭಕ್ತಸಾಗರ ಎರಡು ವರ್ಷದ ಬಳಿಕ ಗ್ರಾಮ ದೇವತೆ ದುರ್ಗಾಂಭಿಕ ಜಾತ್ರೆ ಆರಂಭವಾಗಿದೆ. ಕಷ್ಟ ಎಂದು ಹರಕೆ ಮಾಡಿಕೊಳ್ಳುವ ಭಕ್ತರ ಪಾಲಿಗೆ ದುರ್ಗಾಂಭಿಕ ದೇವಿ ಆಸರೆಯಾಗಿ ನಿಂತಿದ್ದಾಳೆ. ಸಮಸ್ಯೆ ಬಗೆಹರಿಯಲಿ ಎಂದು ಭಕ್ತರು ಹರಕೆ ಹೊತ್ತ ತಮ್ಮ ಬೇಡಿಕೆ ಈಡೇರಿದ ಬಳಿಕ, ಜಾತ್ರೆಯಂದು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸುತ್ತಾರೆ.
ಮದುವೆ ಆಗದೆ ಇರುವುದು, ಮಕ್ಕಳು ಆಗದೆ ಇರುವುದು, ಮಕ್ಕಳ ವಿದ್ಯಾಭ್ಯಾಸ, ಹಣಕಾಸಿನ ಸಮಸ್ಯೆ, ಅನಾರೋಗ್ಯ, ಮನೆ ಕಟ್ಟುವುದು, ಇಂತಹ ಸಮಸ್ಯೆಗಳನ್ನು ದೂರವಾಗುವಂತೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದೇವಿ ಬಳಿ ಕೇಳಿಕೊಂಡು ಹರಕೆ ಕಟ್ಟಿಕೊಂಡರೆ ಸಾಕು. ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುತ್ತಾರೆ ಸ್ಥಳೀಯರು. ಜಾತ್ರೆಯಲ್ಲಿ ಜಿಲ್ಲಾಡಳಿತದ ವಿರೋಧದ ನಡುವೆಯೂ ಕೆಲವರು ಬೇವಿನ ಉಡುಗೆ ತೊಡುವ ಮೂಲಕ ಹರಕೆ ತೀರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಪ್ಲೇಗ್, ಮಲೇರಿಯಾ ಹಾಗು ಚಿಕನ್ ಗುನ್ಯಾದಂತಹ ಮಹಾಮಾರಿ ರೋಗಗಳು ಇಡೀ ದಾವಣಗೆರೆಗೆ ವಕ್ಕರಿಸಿದಾಗ ಪವಾಡದಂತೆ ಜನರನ್ನು ಕಾಪಾಡಿದ್ದು ಇದೇ ದುರ್ಗಾಂಭಿಕ ದೇವಿಯಂತೆ. ರೋಗಗಳು ಆವರಿಸಿದಾಗ ಜನರು ಕಂಗಾಲಾಗಿದ್ದರು. ಇದೇ ವೇಳೆ ಇಡೀ ಊರಿನ ಜನ ದುರ್ಗಾಂಭಿಕ ದೇವಿಯ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಹರಕೆಗಳನ್ನು ಕಟ್ಟಿಕೊಂಡ ಬೆನ್ನಲ್ಲೇ ರೋಗಗಳು ದೂರವಾಗಿದ್ದವು ಅನ್ನೋದು ಭಕ್ತರ ಮಾತು.
ಮಳೆ ಇಲ್ಲದೆ ಹೈರಾಣಾಗಿದ್ದಾಗ ದಾವಣಗೆರೆ ಜನರು ಬೇಡಿಕೊಂಡು ಸಂತೆ ಮಾಡುವುದಾಗಿ ಹರಕೆ ಕಟ್ಟಿಕೊಂಡ ಬೆನ್ನಲ್ಲೇ, ಸತತ ಐದು ಗಂಟೆ ಮಳೆ ಆಗಿತ್ತು ಎಂಬುದು ಇತಿಹಾಸವಾಗಿಯೇ ಉಳಿದಿದೆ. ಹೀಗೇ ಪವಾಡಗಳನ್ನು ಗಮನಿಸಿದ ಭಕ್ತರು ಶಿವಮೊಗ್ಗ, ಭದ್ರಾವತಿ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಹರಕೆಗಳನ್ನು ಕಟ್ಟಿಕೊಳ್ಳುವುದು ವಿಶೇಷ.