ದಾವಣಗೆರೆ:ಇಷ್ಟು ದಿನ ಮೀಸಲಾತಿ ನೀಡುವಂತೆ ಸಿಎಂಗೆ ಮನವಿ ಮಾಡಿಕೊಳ್ಳುತ್ತಿದ್ದೆ, ಆದರೆ ಈಗಿನಿಂದ ನಾನು ಮನವಿ ಮಾಡಲ್ಲ, ಬದಲಿಗೆ ಆಗ್ರಹಿಸುತ್ತೇನೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ದಾವಣಗೆರೆಯಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಇಲ್ಲಿವರೆಗೂ ಶಾಂತಿಯುತ ಹೋರಾಟ ಮಾಡಿದ್ದೇವೆ. ಶನಿವಾರದಿಂದ (ಇಂದು) ಹೋರಾಟ ಹೊಸ ಸ್ವರೂಪ ಪಡೆದುಕೊಳ್ಳಲಿದೆ. ದಾವಣಗೆರೆಯ ರಾಣಿ ಚನ್ನಮ್ಮ ಸರ್ಕಲ್ನಿಂದ ಬಾರುಕೋಲು ಚಳವಳಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಬಾರುಕೋಲು ಚಳವಳಿ : ಕೂಡಲಸಂಗಮ ಶ್ರೀ ಪಂಚಮಸಾಲಿ ಶಾಸಕರು ರಾಜೀನಾಮೆ ಕೊಡಬೇಡಿ, ಎಲ್ಲಾ ಶಾಸಕರು ಸೇರಿ ಬಿಎಸ್ವೈ ರಾಜೀನಾಮೆ ಕೊಡಿಸಬೇಕು. ಹೈಕಮಾಂಡ್ಗೆ ದೂರು ನೀಡಬೇಕು. ಮೀಸಲಾತಿ ಕೊಡಿ ಇಲ್ಲವೇ ರಾಜೀನಾಮೆ ನೀಡಿ ಎಂದು ಒತ್ತಡ ಹಾಕಬೇಕು. ಉತ್ತರ ಕರ್ನಾಟಕಕ್ಕೆ ಸಿಎಂ ಪದವಿ ಬೇಕು, ಪಂಚಮಸಾಲಿಯವರಿಗೆ ಸಿಎಂ ಪಟ್ಟ ನೀಡಬೇಕು. ಪಂಚಮಸಾಲಿಯವರ ಸಹಕಾರ ಪಡೆದು ಸಿಎಂ ಆಗಿದ್ದ ಬಿಎಸ್ವೈ, ನಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಸಿಎಂಗೆ ಪಂಚಮಸಾಲಿ ಯುವ ನಾಯಕರು ರಾಜ್ಯಮಟ್ಟದಲ್ಲಿ ಬೆಳೆಯುತ್ತಾರೆ ಅಂತ ಹೊಟ್ಟೆಕಿಚ್ಚಿದೆ. ಅವರ ಮಕ್ಕಳನ್ನು ಸಿಎಂ ಮಾಡಬೇಕೆಂಬ ಆಸೆ ಇದೆ. ಹೀಗಾಗಿ ನಮ್ಮ ಸಮಾಜವು ಮುಂದುವರೆಯಲು ಬಿಡುತ್ತಿಲ್ಲ, ಮುಂದೆ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ. ಫೆ.15ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ನಮ್ಮ ಯುವಕರಿಂದ ತೊಂದರೆ ಆದರೆ ಅದಕ್ಕೆ ಬಿಎಸ್ವೈ ಹೊಣೆ ಎಂದು ಶ್ರೀಗಳು ಎಚ್ಚರಿಸಿದರು.