ಹರಿಹರ:ಸರ್ಕಾರದ ಜೊತೆಗೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಕೊರೊನಾ ಸೋಂಕನ್ನು ನಿಯಂತ್ರಣಕ್ಕೆ ತರಬಹುದು ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ವಾರ್ಡ್ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸುವಂತೆ ಸರ್ಕಾರದ ಅದೇಶದ ಹಿನ್ನೆಲೆ, ನಗರಸಭೆಯ ಸಭಾಂಗಣದಲ್ಲಿಂದು ನಡೆದ ವಾರ್ಡ್ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರುಗಳಿಗೆ ಕೋವಿಡ್-19 ನಿವಾರಣೆ ಕುರಿತು ತರಬೇತಿ ಕಾರ್ಯಾಗಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಣ್ಣಿಗೆ ಕಾಣದ ವೈರಾಣು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಹಾಗಾಗಿ ಸಾರ್ವಜನಿಕರು ಸರ್ಕಾರದ ನಿಯಮವನ್ನು ಪಾಲಿಸಲು ಸಹಕರಿಸಬೇಕು ಎಂದರು.
ನಗರದ ಪ್ರತಿಯೊಂದು ವಾರ್ಡ್ಗಳಲ್ಲಿ ಸಮಿತಿಯನ್ನು ರಚಿಸಲಿದ್ದು, ಆರೋಗ್ಯ, ನಗರಸಭೆ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ಮತ್ತು ಸ್ವಯಂ ಸೇವಾ ಸಂಸ್ಥೆಯನ್ನೊಳಗೊಂಡು ಈ ಸಮಿತಿಯಲ್ಲಿರುತ್ತಾರೆ ಎಂದ ಅವರು, ಪ್ರತಿ ಸೋಮವಾರ ಸಭೆ ನಡೆಸುವಂತೆ ಸೂಚನೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರ ಮೋಹನ್ ಮಾತನಾಡಿ, ನಾವು ರೋಗದ ವಿರುದ್ಧ ಹೊರಾಡಬೇಕೆ ವಿನಃ ರೋಗಿಯ ವಿರುದ್ಧವಲ್ಲ ಎನ್ನುವುದನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಪ್ರತಿ ವಾರ್ಡ್ ನಲ್ಲಿ ಸಮಿತಿಯನ್ನು ರಚಿಸುತ್ತಿದ್ದೇವೆ ಎಂದರು. ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಅಧಿಕಾರಿಗಳು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಮಾಡುವುದೇ ಈ ಟಾಸ್ಕ್ ಪೋರ್ಸ್ ಸಮಿತಿಯ ರಚನೆಯ ಮೂಲ ಉದ್ದೇಶವಾಗಿದೆ ಎಂದರು.
ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ, ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಿಸಲು ಪ್ರತಿ ವಾರ್ಡ್ನ ಬೂತ್ಮಟ್ಟದಲ್ಲಿ ಸದಸ್ಯರುಗಳನ್ನು ನೇಮಿಸಲಾಗುತ್ತಿದೆ. ಆಯಾ ವಾರ್ಡ್ನ ಬೂತ್ಮಟ್ಟದಲ್ಲಿ ಸಭೆಯನ್ನು ಕರೆದು ಅಲ್ಲಿರುವ ಸಾಧಕ-ಭಾದಕಗಳನ್ನು ಚರ್ಚಿಸಿ, ಕೊರೊನಾ ಪೀಡಿತರನ್ನು ಗುರುತಿಸಿ, ಅವರಿಗೆ ತಿಳುವಳಿಕೆ ಮತ್ತು ಆತ್ಮಸ್ಥೈರ್ಯವನ್ನು ತುಂಬುವಂತೆ ಮಾಡುವುದೇ ಈ ಸಮಿತಿಯ ಉದ್ದೇಶವಾಗಿದೆ ಎಂದರು.