ಹರಿಹರ:ಮಕ್ಕಳು ಕಲಿಕೆಯ ಪ್ರಕ್ರಿಯೆಯಲ್ಲಿ ನಿರಂತರವಾಗಿ ಇರಬೇಕು ಎಂಬ ದೃಷ್ಟಿಯಿಂದ ಸರ್ಕಾರವು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಪ್ರಕ್ರಿಯೆ ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ರಾಜನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಗ್ರಾಮದ ಹೊರವಲಯದ ಆಲದ ಮರದ ಕೆಳಗೆ ಕುಳಿತು, ಶಿಕ್ಷಕರಿಂದ ಪಾಠ ಕೇಳುವ ಮೂಲಕ ವರ್ಷದ ಕಲಿಕೆಯನ್ನು ಆರಂಭಿಸಿದ್ದಾರೆ.
ಪ್ರಕೃತಿ ಮಧ್ಯೆ ಮಕ್ಕಳಿಗೆ ಪಾಠ ಕಳೆದ ಐದು ತಿಂಗಳಿಂದ ಕೋವಿಡ್-19 ವೈರಸ್ನಿಂದಾಗಿ ಶಾಲಾ-ಕಾಲೇಜುಗಳು ಬಂದ್ ಆದ ಹಿನ್ನೆಲೆ ಮನೆಯಲ್ಲೇ ಇರುವಂತಾಗಿದ್ದು, ಈಗಾಗಲೇ ಸರ್ಕಾರವು ದೇಶಾದ್ಯಂತ ಅನ್ಲಾಕ್ ನಿಯಮವನ್ನು ಜಾರಿಗೆ ತಂದಿದೆ. ಅಂತೆಯೇ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬಾರದು ಎನ್ನುವ ದೃಷ್ಠಿಯಲ್ಲಿ ವಿದ್ಯಾಗಮಾ ಎಂಬ ಕಲ್ಪನೆಯೊಂದಿಗೆ ವಿದ್ಯಾರ್ಥಿಗಳು ವಾಸವಿರುವ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಕರೇ ತೆರಳಿ ಪಾಠ ಮಾಡುವ ವ್ಯವಸ್ಥೆಯನ್ನು ಇಲಾಖೆ ಜಾರಿಗೊಳಿಸಿದೆ. ಇದರಿಂದಾಗಿ ಮಕ್ಕಳ ಕಲಿಕೆ ಮತ್ತೆ ಆರಂಭವಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನ ರಾಜನಹಳ್ಳಿ ಪ್ರೌಢಶಾಲೆಯ 9 ಮತ್ತು 10ನೇ ತರಗತಿಯ ಮಕ್ಕಳಿಗೆ ಶಿಕ್ಷಕರು ಶಿಕ್ಷಣ ನೀಡುವ ಕಾರ್ಯವನ್ನು ಆರಂಭಿಸಿದ್ದಾರೆ.
ಈ ಶಾಲೆಗೆ ಬರುವ ಪಕ್ಕದ ಹಲಸಬಾಳು, ಹರಗನಹಳ್ಳಿ ಹಾಗೂ ತಮ್ಲಾಪುರ ಗ್ರಾಮಗಳ ಮಕ್ಕಳಿಗೆ ಆಯಾ ಗ್ರಾಮಗಳಿಗೆ ಶಿಕ್ಷಕರು ತೆರಳಿ, ಆ ಊರಿನ ದೇವಸ್ಥಾನ ಅಥವಾ ಕಲ್ಯಾಣ ಮಂಟಪ, ಅಡಿಕೆ ಮನೆ ಸೇರಿದಂತೆ ವಿಶಾಲವಾದ ಸ್ಥಳಗಳಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ ಎಂಬುದು ಶಿಕ್ಷಕರ ಮಾತು.