ದಾವಣಗೆರೆ: ಮೋದಿ ಮಹಾಸಂಗಮ ಸಮಾವೇಶಕ್ಕೆ ಹತ್ತು ಲಕ್ಷ ಜನ ಸೇರುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದರು. ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಬರುವ ಹರಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಪ್ರತಿಕ್ರಿಯಿಸಿದ ಅವರು, ಯಾವುದೇ ತೊಂದರೆ ಇಲ್ಲದಂತೆ ಕಾರ್ಯಕ್ರಮ ನಿಭಾಯಿಸಲಾಗಿದೆ. ಈ ಸಮಾವೇಶದಿಂದ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಬಿಜೆಪಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಎಂಟು ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂಸದ ಸ್ಥಾನ ಅನರ್ಹಗೊಳಿಸಿದ ವಿಚಾರಕ್ಕೆ ಮಾತನಾಡಿದ ಅವರು, ವಿಪಕ್ಷ ಗಳು ಟೀಕೆ ಮಾಡುತ್ತಿರುತ್ತವೆ. ಕೋರ್ಟ್ ಜೈಲು ಶಿಕ್ಷೆ ಕೊಟ್ಟ ಮೇಲೆ ಅಪರಾಧಿ ಆಗ್ತಾರೆ. ಅಪರಾಧಿ ಆಗಿದ್ದ ಮೇಲೆ ಲೋಕಸಭೆಯಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಳಿಸುವುದು ಕಾನೂನು. ಅದ್ದರಿಂದ ಸಂಸದನ ಸ್ಥಾನದಿಂದ ಅನರ್ಹ ರಾಗಿದ್ದಾರೆ.
ರಾಹುಲ್ ಗಾಂಧಿ ಮೇಲಿರುವ ಪ್ರಕರಣಗಳಂತೆ ನಮ್ಮ ಬಿಜೆಪಿ ನಾಯಕರ ಮೇಲೆ ಯಾವುದೇ ಪ್ರಕರಣಗಳಿಲ್ಲ. ನಮ್ಮ ನಾಯಕರ ಮೇಲಿರುವ ಪ್ರಕರಣಗಳಿಗೆ ಕೋರ್ಟ್ ನಲ್ಲಿ ತೀರ್ಮಾನ ಆಗಿಲ್ಲ. ಅದ್ದರಿಂದ ನಮ್ಮ ಕೆಲ ಬಿಜೆಪಿ ನಾಯಕರು ಸ್ಟೇ ತಂದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಯಾರು: ಬಿಜೆಪಿ ಮೊದಲ ಟಿಕೆಟ್ ಪಟ್ಟಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚುನಾವಣೆ ಘೋಷಣೆ ಆದ ಬಳಿಕ ಕೋರ್ ಕಮಿಟಿ ಸಭೆ ಮಾಡಿ ಪಟ್ಟಿ ಬಿಡುಗಡೆ ಮಾಡ್ತಾರೆ. ಹಾಲಿ ಶಾಸಕರಿಗೆ ಟಿಕೆಟ್ ನೀಡುವ ವಿಚಾರದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸುಳಿವು ಕೊಟ್ಟ, ಸಂಸದರು, ಉತ್ತರದಲ್ಲಿ ನಿಲ್ಲಲು ಉತ್ತರ ಕೊಡ್ತಿನಿ ಎಂದರು.