ದಾವಣಗೆರೆ:ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆ ಗ್ರಾಮದ ರೈತರಲ್ಲಿ ಆತಂಕ ಮನೆ ಮಾಡಿದೆ. ಇಲ್ಲಿನ ರೈತರಿಗೆ ಹೇಳದೇ-ಕೇಳದೆ ಜಮೀನಿನಲ್ಲಿ ಏನೂ ಕೂಡ ಬೆಳೆಯದಂತೆ ಭೂಸ್ವಾಧೀನಾಧಿಕಾರಿಗಳ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಈ ನೋಟಿಸ್ನಿಂದ ಇಡೀ ಗ್ರಾಮದ ರೈತರ ನಿದ್ದೆಗೆಡೆಸುವಂತೆ ಮಾಡಿದೆ.
ಮೆಳ್ಳೆಕಟ್ಟೆ ಗ್ರಾಮದ ಸುತ್ತಮುತ್ತ ಇರುವ 1,150 ಎಕರೆ ಕೃಷಿ ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಸಿದ್ಧತೆ ನಡೆಲಾಗಿದೆ. ಹೀಗಾಗಿ ಜಮೀನು ಬಿಟ್ಟುಕೊಡುವಂತೆ ನೂರಾರು ರೈತರಿಗೆ ನೋಟಿಸ್ ನೀಡಲಾಗಿದೆ. ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಿಂದ ರೈತರ ಪ್ರತಿಯೊಂದು ಮನೆಗೂ ನೋಟೀಸ್ ರವಾನಿಸಲಾಗಿದೆ.
ಅಲ್ಲದೇ, ಕೈಗಾರಿಕಾ ಕಾರಿಡಾರ್ ನಿರ್ಮಾಣ ಯೋಜನೆಗೆ ನಿಮ್ಮ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದು, ಏನಾದರೂ ಆಕ್ಷೇಪಣೆಗಳು ಇದ್ದರೆ ತಿಳಿಸಬಹುದು ಎಂದು ಒಂದೇ ದಿನ ನೂರಾರು ರೈತರಿಗೆ ಈ ರೀತಿಯ ನೋಟಿಸ್ ಕಳಿಸಲಾಗಿದೆ. ಇದರಿಂದ ಆಕ್ರೋಶ ಗೊಂಡ ರೈತರು ಸರ್ಕಾರದ ವಿರುದ್ದ ಹಾಗೂ ಶಾಸಕರು, ಸಂಸದರು ವಿರುದ್ದ ಧಿಕ್ಕಾರ ಕೂಗಿ, ಜಮೀನಿಗಳಲ್ಲಿ ಮಲಗಿ ಪ್ರಾಣ ಹೋದರೂ ನಾವು ಜಮೀನುಗಳನ್ನು ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ.